ಅಕ್ರಮ ಕಲ್ಲಿದ್ದಲು ಗಣಿಗಾರಿಕೆ: ಮಮತಾ ಸೋದರಳಿಯ ಅಭಿಷೇಕ್‌ ಪತ್ನಿಗೆ ಸಿಬಿಐ ನೋಟೀಸ್‌

ಕಲ್ಲಿದ್ದಲು ಗಣಿಗಾರಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಟಿಎಂಸಿ ಸಂಸದ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ನಿವಾಸಕ್ಕೆ ತೆರಳಿ ನೊಟೀಸ್‌ ನೀಡಿದೆ.
ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ 2020 ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಕಲ್ಲಿದ್ದಲು ಕಳ್ಳಸಾಗಣೆ ಕುರಿತು ವಿಚಾರಣೆ ನಡೆಸಲು  ಅಭಿಷೇಕ್  ‌ ಬ್ಯಾನರ್ಜಿ  ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು ರುಜಿರಾ ಬ್ಯಾನರ್ಜಿಗೆ ನೊಟೀಸ್‌ ನೀಡಿದರು.
ಕಲ್ಲಿದ್ದಲು ಅಕ್ರಮ ಗಣಿಗಾರಿಕೆಯಲ್ಲಿ ಅಭಿಷೇಕ್ ಸೇರಿದಂತೆ ಹಲವು ಟಿಎಂಸಿ ನಾಯಕರ ಪಾಲ್ಗೊಳ್ಳುವಿಕೆ ಇದೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದು, ಅವರು ಕಲ್ಲಿದ್ದಲಿನ ಅಕ್ರಮ ಮಾರಾಟದಿಂದ ಗಳಿಸಿದ ಹಣವನ್ನು ಆಡಳಿತ ಪಕ್ಷದ ನಿಧಿಗೆ ಬಳಸಿಕೊಳ್ಳುತ್ತಿದ್ಧಾರೆ ಎಂದು ಆರೋಪ ಮಾಡಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಯನ್ನು ಸಿಬಿಐ ಕರೆಸಿದೆ. ಪ್ರಕರಣ ಕುರಿತು ಸಿಬಿಐ ಕೋಲ್ಕತ್ತದ ವಿವಿಧೆಡೆ ಇತ್ತೀಚಿಗೆ ದಾಳಿ ನಡೆಸಿತ್ತು.
ಕುಟುಂಬ ರಾಜಕಾರಣಕ್ಕೆ ಉತ್ತೇಜನ ನೀಡುತ್ತಿರುವ ಮಮತಾ ತಮ್ಮ ಸೋದರಳಿಯ ಅಭಿಷೇಕ್‌ನನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ, ಅಮಿತ್‌ ಶಾ ಮೊದಲು ಅಭಿಷೇಕ್‌ ವಿರುದ್ಧ ಸ್ಪರ್ಧಿಸಿ ನಂತರ ನನ್ನ ವಿರುದ್ಧ ಸೆಣೆಸಲಿ ಎಂದು ಸವಾಲು ಹಾಕಿದ್ದರು.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement