ಐವೈಸಿ ಮುಖ್ಯಸ್ಥ ಬಿ.ವಿ. ಶ್ರೀನಿವಾಸ ವಿರುದ್ಧ ಮಾನಸಿಕ ಕಿರುಕುಳ, ತಾರತಮ್ಯದ ಆರೋಪ ಮಾಡಿದ ಅಸ್ಸಾಂ ಯುವ ಕಾಂಗ್ರೆಸ್ ನಾಯಕಿ

ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಸ್ಸಾಂ ಘಟಕದ ಮುಖ್ಯಸ್ಥೆ, ಡಾ. ಅಂಗಿತಾ ದತ್ತಾ ಅವರು ತನ್ನ ಸಹೋದ್ಯೋಗಿ ಮತ್ತು ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ ಬಿವಿ ವಿರುದ್ಧ ಲಿಂಗ ತಾರತಮ್ಯ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಗಿತಾ ದತ್ತಾ ಅವರು ಅಸ್ಸಾಂನಲ್ಲಿ ತರುಣ್ ಗೊಗೊಯ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದ ಅಂಜನ್ ದತ್ತಾ ಅವರ ಪುತ್ರಿ. ಹಲವು ಟ್ವೀಟ್‌ಗಳಲ್ಲಿ, ದತ್ತಾ ಅವರು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು, ತಾನು ಈ ಬಗ್ಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಳಿ ದೂರು ನೀಡಿದ್ದರ ಹೊರತಾಗಿಯೂ ಶ್ರೀನಿವಾಸ ಅವರ ವಿರುದ್ಧ ಅವರು ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ತಾನು ದೂರು ನೀಡಿದ್ದರ ಹೊರತಾಗಿಯೂ, “ಶ್ರೀನಿವಾಸ ವಿರುದ್ಧ ಯಾವುದೇ ತನಿಖಾ ಸಮಿತಿಯನ್ನು ಪ್ರಾರಂಭಿಸಲಾಗಿಲ್ಲ” ಎಂದು ಅವರು ಹೇಳಿದರು.
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅವರು ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ನನ್ನ ಮೇಲೆ ಲಿಂಗ ತಾರತಮ್ಯ ಮಾಡುತ್ತಿದ್ದಾರೆ. ಅನೇಕ ಬಾರಿ ಈ ಬಗ್ಗೆ ನಾಯಕತ್ವದ ಗಮನಕ್ಕೆ ತಂದರೂ ಅದು ಕಿವುಡಾಗಿದೆ ”ಎಂದು ದತ್ತಾ ತಮ್ಮ ಟ್ವೀಟ್‌ ಮಾಡಿದ್ದು, ಒಂದರಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

“ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಂದು ನಾನು ತಿಂಗಳುಗಟ್ಟಲೆ ಮೌನವಾಗಿದ್ದೆ, ಆದರೆ ಯಾರೂ ಈ ಬಗ್ಗೆ ಆಸಕ್ತಿ ತೋರಲಿಲ್ಲ. ಒಬ್ಬ ಲಿಂಗ ತಾರತಮ್ಯ ಮಾಡುವ ವ್ಯಕ್ತಿ ಭಾರತೀಯ ಯುವ ಕಾಂಗ್ರೆಸ್‌ (IYC) ಅನ್ನು ಹೇಗೆ ಮುನ್ನಡೆಸಬಹುದು, ಪ್ರತಿ ಬಾರಿಯೂ ಮಹಿಳೆಗೆ ಕಿರುಕುಳ ನೀಡುತ್ತಾನೆ. ಪ್ರಿಯಾಂಕಾ ಗಾಂಧಿಯವರ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂಬುದು ಏನಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಜಮ್ಮುವಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಈ ಬಗ್ಗೆ ಗಮನಕ್ಕೆ ತಂದಿದ್ದೆ ಎಂದು ಹೇಳಿದ್ದಾರೆ.
ನಾನು ರಾಹುಲ್ ಗಾಂಧಿಯ ಮೇಲೆ ಭಾರೀ ನಂಬಿಕೆ ಹೊಂದಿದ್ದೆ. ಇನ್ನೂ ಆತನ ವಿರುದ್ಧ ಯಾವುದೇ ವಿಚಾರಣೆಯಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಮಹಿಳಾ ನಾಯಕಿ. ನಾನು ಅಂತಹ ಕಿರುಕುಳಕ್ಕೆ ಒಳಗಾಗಿದ್ದರೆ, ಕಾಂಗ್ರೆಸ್ ಸೇರಲು ಮಹಿಳೆಯರನ್ನು ಹೇಗೆ ಪ್ರೋತ್ಸಾಹಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತೀಯ ಯುವ ಕಾಂಗ್ರೆಸ್‌ (IYC) ಕಾನೂನು ಘಟಕವು ದತ್ತಾ ವಿರುದ್ಧ “ಬಲವಾದ ಕಾನೂನು ಕ್ರಮ” ಪ್ರಾರಂಭಿಸುವುದಾಗಿ ಹೇಳಿದೆ. “ಡಾ. ದತ್ತಾ ಅವರು ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ ಜಿ ವಿರುದ್ಧ ಸಂಪೂರ್ಣವಾಗಿ ಅಸಂಸದೀಯ, ಘನತೆರಹಿತ, ಮಾನಹಾನಿಕರ, ದುರುದ್ದೇಶಪೂರಿತ ಪದಗಳನ್ನು ಬಳಸಿದ್ದಾರೆ ಮತ್ತು ಅವರ ವಿರುದ್ಧ ಸಂಪೂರ್ಣವಾಗಿ ಕ್ಷುಲ್ಲಕ ಆರೋಪಗಳನ್ನು ಮಾಡಿದ್ದಾರೆ. ಐವೈಸಿ ಲೀಗಲ್ ಸೆಲ್ ಇದಕ್ಕೆ ಸಂಬಂಧಿಸಿದಂತೆ ಬಲವಾದ/ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸುತ್ತಿದೆ,” ಐವೈಸಿಯ ಕಾನೂನು ಕೋಶವು ಟ್ವೀಟ್‌ನಲ್ಲಿ ತಿಳಿಸಿದೆ.
2019 ರಲ್ಲಿ, ಮತ್ತೋರ್ವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಮಥುರಾದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷ ಮರಳಿ ಸೇರಿಸಿಕೊಂಡ ನಂತರ ಕಾಂಗ್ರೆಸ್‌ ತೊರೆದು ಶಿವಸೇನೆಗೆ ಸೇರಿದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement