ಧಾರವಾಡ: ಚಾಕುವಿನಿಂದ ಇರಿದು ಗ್ರಾಪಂ ಉಪಾಧ್ಯಕ್ಷನ ಹತ್ಯೆ

ಧಾರವಾಡ: ಗ್ರಾಮದ ಜಾತ್ರೆಯಲ್ಲಿ ಪ್ರಸಾದ ವಿತರಣೆ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಬಿಜೆಪಿ ಯುವ ಮುಖಂಡ ಹಾಗೂ ಕೋಟೂರ ಗ್ರಾಪಂ ಉಪಾಧ್ಯಕ್ಷ ಪ್ರವೀಣ ಕಮ್ಮಾರ (36) ಎಂಬವರನ್ನು ಹತ್ಯೆ ಮಾಡಿದ ಘಟನೆ ತಾಲೂಕಿನ ಕೋಟೂರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಂಗಳವಾರ ಗ್ರಾಮದ ಉಡಚಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಪ್ರಸಾದ ವಿತರಣೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದೆ. ಕೋಟೂರ ಗ್ರಾಪಂ ಉಪಾಧ್ಯಕ್ಷರಾಗಿದ್ದ ಪ್ರವೀಣ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಆದರೆ, ಕುಡಿದ ಅಮಲಿನಲ್ಲಿ ಜಗಳ ಮಾಡಿದ್ದ ಗುಂಪೊಂದು ನಂತರ ಪ್ರವೀಣ ಕಮ್ಮಾರ ಅವರಿಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿತ್ತು. ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ ಬೆಳಗಿನ ಜಾವ ಪ್ರವೀಣ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಾಲ್ವರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದ್ದು ಪೊಲೀಸರು ಇವರನ್ನು ಹುಡುಕುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಭೇಟಿ ನೀಡಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement