2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ: ಮಾಯಾ ಕೊಡ್ನಾನಿ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿದ ಅಹಮದಾಬಾದ್ ನ್ಯಾಯಾಲಯ

21 ವರ್ಷಗಳ ನಂತರ, ಅಹಮದಾಬಾದ್‌ನ ನ್ಯಾಯಾಲಯವು 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿದೆ.
ಗೋಧ್ರಾ ರೈಲು ದಹನ ಘಟನೆಯ ನಂತರ ಫೆಬ್ರವರಿ 28, 2002 ರಂದುಅಹಮದಾಬಾದ್‌ನ ನರೋಡಾ ಗ್ರಾಮದಲ್ಲಿ 11 ಜನರನ್ನು ಸಜೀವ ದಹಿಸಲಾಯಿತು.
ಫೆಬ್ರವರಿ 27, 2002 ರಂದು, ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 57 ಕರಸೇವಕರನ್ನು ಗೋಧ್ರಾದಲ್ಲಿ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಸಜೀವ ದಹನ ಮಾಡಲಾಯಿತು, ಇದು ರಾಜ್ಯದಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ಒಂದು ದಿನದ ನಂತರ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಗುಜರಾತ್‌ನಲ್ಲಿ ಬಂದ್‌ಗೆ ಕರೆ ನೀಡಲಾಯಿತು.
ಸಶಸ್ತ್ರ ಪುರುಷರ ದೊಡ್ಡ ಗುಂಪು ಅಹಮದಾಬಾದ್‌ನ ನರೋಡಾ ಪಾಟಿಯಾ ಗ್ರಾಮದಲ್ಲಿ ಜಮಾಯಿಸಿ ಮನೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ನಿವಾಸಿಗಳ ಮೇಲೆ ದಾಳಿ ನಡೆಸಲಾಯಿತು. ಈ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದು, ನರೋಡಾ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ 11 ಜನರನ್ನು ಸಜೀವ ದಹನ ಮಾಡಲಾಯಿತು.
ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಒಟ್ಟು 86 ಮಂದಿ ಆರೋಪಿಗಳಾಗಿದ್ದು, ಐಪಿಸಿಯ ಸೆಕ್ಷನ್ 302, 307, 143, 147, 148, 129 ಬಿ, 153 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಹದಿನೆಂಟು ಜನರು ಸತ್ತರು.
2008ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಲಾಗಿತ್ತು. ಪ್ರಕರಣದ ವಿಚಾರಣೆ 2009 ರಲ್ಲಿ ಪ್ರಾರಂಭವಾಯಿತು. ಪ್ರಕರಣದಲ್ಲಿ 187 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, 57 ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಮಾರು 13 ವರ್ಷಗಳ ಕಾಲ ಆರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದರು.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement