ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಭಯಕ್ಕೆ ಕಾರಣವಾಗುತ್ತದೆ”: ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಪರಾಧಿ-ಗ್ಯಾಂಗ್‌ಸ್ಟರ್‌ ಬಿಡುಗಡೆಗೆ ಐಎಎಸ್ ಸಂಘ

ನವದೆಹಲಿ: ದಲಿತ ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆನಂದ್‌ ಮೋಹನ್‌ ಸಿಂಗ್‌ ಬಿಡುಗಡೆಗೆ ಅನುಕೂಲವಾಗಲಿರುವ ಬಿಹಾರದ ನಿಯಮಗಳ ಬದಲಾವಣೆಯ ವಿರುದ್ಧ ದೇಶದ ಉನ್ನತಾಧಿಕಾರಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
“ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಧಾರವು ನಿರ್ಭಯಕ್ಕೆ ಕಾರಣವಾಗುತ್ತದೆ, ಸಾರ್ವಜನಿಕ ಸೇವಕರ ನೈತಿಕತೆ ಕುಗ್ಗಿಸುತ್ತದೆ, ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತವನ್ನು ಅಣಕಿಸುತ್ತದೆ” ಎಂದು ಕೇಂದ್ರ ಐಎಎಸ್ ಅಸೋಸಿಯೇಷನ್ ಟ್ವಿಟರ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ.
“ಕೈದಿಗಳ ವರ್ಗೀಕರಣ ನಿಯಮಗಳ ಬದಲಾವಣೆಯಿಂದ ಗೋಪಾಲಗಂಜ್‌ನ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿವಂಗತ ಐಎಎಸ್‌ ಅಧಿಕಾರಿ ಜಿ. ಕೃಷ್ಣಯ್ಯ ಅವರನ್ನು ಕ್ರೂರವಾಗಿ ಹತ್ಯೆಗೈದ ಅಪರಾಧಿಗಳನ್ನು ಬಿಡುಗಡೆ ಮಾಡುವ ಬಿಹಾರ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಕೇಂದ್ರೀಯ ಐಎಎಸ್ ಅಸೋಸಿಯೇಷನ್ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತದೆ ಎಂದು ಟ್ವೀಟ್ ಹೇಳಿದೆ.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಡುಗಡೆಯಾಗಲಿರುವ 27 ಅಪರಾಧಿಗಳಲ್ಲಿ ರಜಪೂತ ಸಮುದಾಐಕ್ಕೆ ಸೇರಿದ ಆನಂದ್ ಮೋಹನ್ ಸಿಂಗ್ ಕೂಡ ಸೇರಿದ್ದಾರೆ.
1994ರಲ್ಲಿ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್ ಸಿಂಗ್ ಪ್ರಚೋದನೆ ಮಾಡಿದ ಗುಂಪೊಂದು ಹತ್ಯೆ ಮಾಡಿತ್ತು. ಆನಂದ್ ಮೋಹನ್ ಸಿಂಗ್ ಅವರ ಪಕ್ಷಕ್ಕೆ ಸೇರಿದ ಮತ್ತೊಬ್ಬ ಗ್ಯಾಂಗ್‌ಸ್ಟರ್‌-ರಾಜಕಾರಣಿಯ ಹತ್ಯೆಯನ್ನು ಪ್ರತಿಭಟಿಸುತ್ತಿರುವ ಜನಸಮೂಹವು ಜಿಲ್ಲಾಧಿಕಾರಿಯನ್ನು ಕಾರನ್ನು ಹೊರಗೆಳೆದು ಥಳಿಸಿ ಹತ್ಯೆ ಮಾಡಿತ್ತು.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

ಲಾಲು ಯಾದವ್ ಅವರ ಆರ್‌ಜೆಡಿ (RJD)ಯಿಂದ ಶಾಸಕರಾಗಿರುವ ಪ್ರಬಲ ವ್ಯಕ್ತಿಗೆ 2007 ರಲ್ಲಿ ಕೆಳ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಆದರೆ ಪಾಟ್ನಾ ಹೈಕೋರ್ಟ್ ನಂತರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು, ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಬೆಂಬಲಿಸಿತು. ಅವರು 15 ವರ್ಷಗಳಿಂದ ಜೈಲಿನಲ್ಲಿದ್ದರು.
ಈ ತಿಂಗಳ ಆರಂಭದಲ್ಲಿ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಜೈಲು ನಿಯಮಗಳನ್ನು ಬದಲಾಯಿಸಿತು, ಕರ್ತವ್ಯದಲ್ಲಿದ್ದ ಸಾರ್ವಜನಿಕ ನೌಕರನನ್ನು ಹತ್ಯೆಗೈದ ಅಪರಾಧಿಗಳ ಜೈಲು ಶಿಕ್ಷೆಯನ್ನು ಹಿಂತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಹೊಸ ನಿಯಮದಡಿ 27 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ನಿನ್ನೆ, ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಈ ವಿಚಾರ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಸುಶೀಲ್ ಮೋದಿಯಂತಹ ಬಿಜೆಪಿ ನಾಯಕರು ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಈ ಬದಲಾವಣೆಯು “ದಲಿತ ವಿರೋಧಿ” ಎಂದು ಹೇಳಿದೆ ಮತ್ತು ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿತೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದೆ.

ನಿತೀಶಕುಮಾರ ಅವರ ಜನತಾ ದಳ (ಯುನೈಟೆಡ್) ಬಿಜೆಪಿಗೆ ತಿರುಗೇಟು ನೀಡಿತು ಮತ್ತು ಮಾಯಾವತಿಯನ್ನು ುತ್ತರ ಪ್ರದೇಶದಲ್ಲಿ ಅದರ ಬಿ-ಟೀಮ್ ಎಂದು ಆರೋಪಿಸಿತು.
ಮಗನ ಮದುವೆಗಾಗಿ 15 ದಿನಗಳ ಪೆರೋಲ್ ಮೇಲೆ ಹೊರಬಂದಿರುವ ಆನಂದ್ ಮೋಹನ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಗುಜರಾತ್ ನಲ್ಲಿ ಬಿಲ್ಕಿಸ್ ಬಾನೋ ಪ್ರಕರಣದ ಕೆಲವು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಅದೂ ಕೂಡ ನಿತೀಶ್-ಆರ್ ಜೆಡಿ ಒತ್ತಡದಿಂದ ನಡೆದಿದೆಯೇ?” ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರ ಸಮಾಜಕ್ಕೆ ತಪ್ಪು ಸಂಕೇತಗಳನ್ನು ರವಾನಿಸಲಿದೆ ಎಂದು ಜಿ ಕೃಷ್ಣಯ್ಯ ಅವರ ಪತ್ನಿ ಉಮಾ ಕೃಷ್ಣಯ್ಯ ಎನ್‌ಡಿಟಿವಿಗೆ ಹೇಳಿದ್ದಾರೆ. “ಇದು ಒಂದು ರೀತಿಯಲ್ಲಿ ಅಪರಾಧಿಗಳನ್ನು ಪ್ರೋತ್ಸಾಹಿಸುತ್ತಿದೆ. ನೀವು ಅಪರಾಧ ಮಾಡಿ ಜೈಲಿಗೆ ಹೋಗಬಹುದು ಆದರೆ ನಂತರ ಮುಕ್ತರಾಗಬಹುದು ಮತ್ತು ರಾಜಕೀಯಕ್ಕೆ ಸೇರಬಹುದು ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ಮರಣದಂಡನೆ ಒಳ್ಳೆಯದು” ಎಂದು ಹೇಳಿದ ಅವರು ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement