ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಗಾಳಿಮಳೆಯಿಂದಾಗಿ ನಗರದಲ್ಲಿ ಸುಮಾರು 30 ಮರಗಳು ಬಿದ್ದಿದ್ದು, ಹಲವೆಡೆ ಜಲಾವೃತವಾಗಿದೆ ಎಂದು ಬೆಂಗಳೂರಿನ ಸಿವಿಲ್ ಡಿಫೆನ್ಸ್ ತಂಡ ತಿಳಿಸಿದೆ.
ಶನಿವಾರ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕಿಯೊಬ್ಬಳು ಸಾವಿಗೀಡಾಗಿದ್ದಾಳೆ. ಜೀವನಹಳ್ಳಿಯ ಈಸ್ಟ್ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಬಾಲಕಿ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ಪಾರ್ಕ್ ಬಳಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು, ಕೂಡಲೇ ಪೋಷಕರು ಬಾಲಕಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದರೂ ಆಕೆಯನ್ನು ರಕ್ಷಿಸಲಾಗಲಿಲ್ಲ ಎಂದು ಹೇಳಲಾಗಿದೆ.
ಮಳೆಯು ಬೆಂಗಳೂರಿನ ನಿವಾಸಿಗಳಿಗೆ ತಂಪು ವಾತಾವರಣವನ್ನು ಉಂಟು ಮಾಡಿತು. ಆದರೆ ಶನಿವಾರ (ಮಾರ್ಚ್ 22) ಸಂಜೆ ನಗರದ ಹಲವಾರು ಭಾಗಗಳಲ್ಲಿ ಜಲಾವೃತ ಮತ್ತು ಸಂಚಾರ ದಟ್ಟಣೆಯನ್ನು ಉಂಟುಮಾಡಿದವು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಂತಹ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಹವಾಮಾನ ವೈಪರೀತ್ಯದಿಂದಾಗಿ ಕನಿಷ್ಠ 19 ವಿಮಾನಗಳನ್ನು ಇತರ ಸ್ಥಳಗಳಿಗೆ ತಿರುಗಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಇವುಗಳಲ್ಲಿ 11 ಇಂಡಿಗೋ ವಿಮಾನಗಳು, ನಾಲ್ಕು ಏರ್ ಇಂಡಿಯಾ ಎಕ್ಸ್ಪ್ರೆಸ್, ಎರಡು ಆಕಾಶ ಮತ್ತು ಎರಡು ಏರ್ ಇಂಡಿಯಾ ವಿಮಾನಗಳಾಗಿವೆ.
ಸಂಚಾರಿ ಪೊಲೀಸರ ಪ್ರಕಾರ, ಹುಣಸಮಾರನಹಳ್ಳಿಯಲ್ಲಿ ಭಾರೀ ಜಲಾವೃತಗೊಂಡಿದ್ದು, ತೀವ್ರ ದಟ್ಟಣೆ ಉಂಟಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ, ಬಳಿಕ ಸಂಚಾರ ಸುಗಮಗೊಳಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ