ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹನ್ನೊಂದು ಅಪರಾಧಿಗಳನ್ನು ಎರಡು ವಾರಗಳಲ್ಲಿ ಮತ್ತೆ ಜೈಲಿಗೆ ಹಾಕುವಂತೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ಆದೇಶದಲ್ಲಿ ಹೇಳಿದೆ.
ಹನ್ನೊಂದು ಅಪರಾಧಿಗಳಿಗೆ ತನ್ನ ಕ್ಷಮಾದಾನ ನೀತಿ ಅನ್ವಯಿಸುವ ಅಧಿಕಾರ ಗುಜರಾತ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ. ಗುಜರಾತ್ ಸರ್ಕಾರದ ಕ್ರಮಕ್ಕೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ತಾನು ನೀಡಿರುವ ತೀರ್ಪನ್ನು ಮೀರಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ತೀಕ್ಷ್ಣ ಮಾತುಗಳಲ್ಲಿ ಎಚ್ಚರಿಸಿತು.
ಗುಜರಾತ್ ಸರ್ಕಾರವು ಪರಿಹಾರ ಆದೇಶವನ್ನು ಜಾರಿಗೊಳಿಸುವ ಸೂಕ್ತ ಅಧಿಕಾರವನ್ನು ಹೊಂದಿಲ್ಲ. ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಮಹಾರಾಷ್ಟ್ರ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂದು ಅದು ಹೇಳಿದೆ.
“ಅಪರಾಧಿಗಳು ಜೈಲಿನಿಂದ ಹೊರಗುಳಿಯಲು ಅನುವು ಮಾಡಿಕೊಡುವುದಕ್ಕಾಗಿ ನಾವು 142 ನೇ ವಿಧಿಯನ್ನು ಬಳಸಲು ಸಾಧ್ಯವಿಲ್ಲ. ಇದರಿಂದ ಅವರು ಅಮಾನ್ಯ ಆದೇಶಗಳ ಫಲಾನುಭವಿಯಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
ಪ್ರತಿವಾದಿಗಳ (ಅಪರಾಧಿಗಳ) ಸ್ವಾತಂತ್ರ್ಯ ಕಸಿದುಕೊಳ್ಳುವುದು ನ್ಯಾಯಯುತವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ . ಶಿಕ್ಷೆಗೊಳಗಾಗಿ ಜೈಲಿಗೆ ಹೋದ ನಂತರ ಅವರು ಸ್ವಾತಂತ್ರ್ಯದ ಹಕ್ಕನ್ನು ಕಳೆದುಕೊಂಡಿದ್ದು ಕಾನೂನಿನ ಪ್ರಕಾರ ವಿನಾಯಿತಿ ಪಡೆಯಲು ಬಯಸಿದರೆ ಅವರು ಜೈಲಿನಲ್ಲಿರಬೇಕು.
ಹೀಗಾಗಿ ಎಲ್ಲಾ ಪ್ರತಿವಾದಿಗಳು ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳೆದುರು ಶರಣಾಗಬೇಕು ಅದು ಆದೇಶಿಸಿದೆ.
ಮಾನವ ಹಕ್ಕುಗಳ ಮುಖ್ಯ ಗುರಿ ವೈಯಕ್ತಿಕ ಸ್ವಾತಂತ್ರ್ಯ. ಅದನ್ನು ಕಾನೂನಿನ ಪ್ರಕಾರ ಮಾತ್ರ ಪಡೆಯಬಹುದು ಆದರೆ ಈ ಪ್ರಕರಣದಲ್ಲಿ ಬಿಡುಗಡೆ ಎಂಬುದು ಅಧಿಕಾರ ಮತ್ತು ನ್ಯಾಯವ್ಯಾಪ್ತಿಯಿಲ್ಲದ ಆದೇಶಗಳಿಂದಾಗಿದೆ. ಕಾನೂನು ಆಳ್ವಿಕೆ ಎಂಬುದು ಅದೃಷ್ಟವಂತರ ರಕ್ಷಣೆಗೆ ಬರುವುದಲ್ಲ ಎಂದು ಹೇಳಿದೆ.
ಅಪರಾಧಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಆದೇಶಿಸುವ ಅಧಿಕಾರ ತನಗೆ ಇದೆ ಎಂದು ಗುಜರಾತ್ ಸರ್ಕಾರ ಭಾವಿಸಿದ್ದು ತಪ್ಪು. ನ್ಯಾಯಾಂಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಅದರ ನಿರ್ಧಾರ ಸಹಾನುಭೂತಿಯನ್ನು ಆಧರಿಸಿರಬಾರದು. ಭಯ, ಅಭೀಪ್ಸೆಗಳಿಲ್ಲದೆ ಅದು ಕರ್ತವ್ಯ ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಗುಜರಾತ್ ಸರ್ಕಾರವು ತನ್ನಲ್ಲಿಲ್ಲದ ಅಧಿಕಾರವನ್ನು ಕಸಿದುಕೊಂಡು ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯವೆಸಗಿದೆ. ಕಾನೂನಿನ ನಿಯಮವನ್ನು ಉಲ್ಲಂಘಿಸಲಾಗಿದೆ. ಆ ಆಧಾರದ ಮೇಲೆ, ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಲು ಅರ್ಹವಾಗಿದೆ” ಎಂದು ನ್ಯಾಯಪೀಠ ಹೇಳಿತು.
ಗೋಧ್ರಾ ಹತ್ಯಾ ಕಾಂಡ 2002ರ ನಂತರದ ಕೋಮು ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ 11 ಅಪರಾಧಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಷ್ಟೇ ಅಲ್ಲ, ಬಿಲ್ಕಿಸ್ ಬಾನು ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದರು. ಹತ್ಯೆಗೀಡಾದವರ ಪೈಕಿ ಬಾನು ಅವರ ಮೂರು ವರ್ಷದ ಮಗಳೂ ಇದ್ದಳು. 2022ರ ಆಗಸ್ಟ್ ತಿಂಗಳಲ್ಲಿ ಗುಜರಾತ್ ಸರ್ಕಾರ ಈ ಕೋಮು ದೌರ್ಜನ್ಯದ ಅಪರಾಧಿಗಳನ್ನು’ಸನ್ನಡತೆ’ಯ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಮತ್ತು ಅನೇಕರು ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ