ಪಠ್ಯ ಪುಸ್ತಕಗಳ ಪರಿಷ್ಕರಣಾ ಸಮಿತಿ ವಿಸರ್ಜನೆ, ರದ್ದು ಮಾಡಿಲ್ಲ, ಪುನಃ ಸಮಿತಿ ರಚನೆ ಪ್ರಸ್ತಾವನೆ ಇಲ್ಲ: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಪಠ್ಯ ಪುಸ್ತಕಗಳ ಪರಿಷ್ಕರಣಾ ಕಾರ್ಯದ ಅವಧಿ ಮುಗಿದಿರುವ ಕಾರಣ ಸಮಿತಿಯನ್ನು ವಿಸರ್ಜಿಸಲಾಗಿದೆ. ಪುನಃ ಮತ್ತೆ ಸಮಿತಿ ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅವಧಿ ಮುಗಿದಿರುವ ಕಾರಣ ನಿನ್ನೆಯಷ್ಟೇ (ಶುಕ್ರವಾರ) ಸಮಿತಿಯನ್ನು ವಿಸರ್ಜಿಸಲಾಗಿದೆ. ಅದನ್ನು ವಿಸರ್ಜನೆ ಮಾಡಲಾಗಿದೆಯೇ ಹೊರತು ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದರಿಂದ ಶುಕ್ರವಾರ ನಾನೇ ಖುದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರನ್ನು ಕರೆಸಿ ಪುಸ್ತಕಗಳನ್ನು ಪರಿಶೀಲಿಸಿದ್ದೇನೆ. ಬಸವಣ್ಣನವರ ಬಗ್ಗೆ ಪಠ್ಯದಲ್ಲಿ ಅಳವಡಿಕೆಯಾದ ಅಂಶಗಳ ಬಗ್ಗೆ ಸಾಣೆಹಳ್ಳಿ ಮಠದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಪಠ್ಯ ಪುಸ್ತಕದಲ್ಲಿ ಎಲ್ಲಿಯೂ ಕೂಡ ಅವರಿಗೆ ಅಗೌರವ ಸೂಚಿಸುವಂತಹ ಪದ ಬಳಕೆ ಮಾಡಿಲ್ಲ. ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಪಠ್ಯಕ್ಕೂ ಪರಿಷ್ಕೃತ ಪಠ್ಯಕ್ಕೂ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರು ಪ್ರಶ್ನಿಸಿದ ಲಿಂಗದೀಕ್ಷೆ ಬರಗೂರು ಸಮೀತಿಯ ಪಠ್ಯದಲ್ಲಿಯೇ ಇತ್ತು. ಇದನ್ನು ಮಠಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವೇಳೆ ಶ್ರೀಗಳಿಗೆ ಮತ್ತೂ ಗೊಂದಲಗಳಿದ್ದರೆ ಅವರ ಜೊತೆ ನಾನು ಮಾತನಾಡುತ್ತೇನೆ ಎಂದರು. ಅ

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

2015ರಲ್ಲಿ ಅಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ಅವರು ಏನು ಉಲ್ಲೇಖ ಮಾಡಿದ್ದಾರೋ ಅದನ್ನೇ ಯಥಾವತ್ತಾಗಿ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಂದು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ಲ. ಈಗ ಏಕೆ ವಿರೋಧ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಪಠ್ಯ ಪುಸ್ತಕದಲ್ಲಿ ಕೆಲವು ಲೋಪದೋಷಗಳು ಕಂಡುಬಂದಿದ್ದರಿಂದ ಅದನ್ನು ಸರಿಪಡಿಸಿ ಮುದ್ರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಶೈಕ್ಷಣಿಕ ಅವಧಿ ಆರಂಭವಾಗಿರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಆದಷ್ಟು ಶೀಘ್ರ ಪ್ರಕಟಿಸಿ ವಿತರಣೆ ಮಾಡಲು ಸೂಚನೆ ನೀಡುವುದಾಗಿ ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement