ಪಾಟ್ನಾ: ದೇಶದಲ್ಲಿ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ – ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕಾಗಿ .2.5 ಕೋಟಿ ರೂ.ಗಳ ಮೌಲ್ಯದ ಭೂಮಿಯನ್ನು ದಾನ ಮಾಡಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ ಕೈಗೆತ್ತಿಕೊಂಡಿರುವ ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್, ಭೂಮಿ ನೀಡಿದ ಇಶ್ತಿಯಾಕ್ ಅಹ್ಮದ್ ಖಾನ್ ಗುವಾಹತಿಯಲ್ಲಿರುವ ಪೂರ್ವ ಚಂಪಾರಣ್ನ ಉದ್ಯಮಿ ಎಂದು ಹೇಳಿದ್ದಾರೆ.
ಅವರು ಇತ್ತೀಚೆಗೆ ಕೇಶರಿಯಾ ಉಪವಿಭಾಗದ [ಪೂರ್ವ ಚಂಪಾರಣ್ ] ರಿಜಿಸ್ಟ್ರಾರ್ ಕಚೇರಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯ ದಾನಕ್ಕೆ ಸಂಬಂಧಿಸಿದ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದಾರೆ” ಎಂದು ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಕುನಾಲ್ ಸುದ್ದಿಗಾರರಿಗೆ ತಿಳಿಸಿದರು.
ಖಾನ್ ಮತ್ತು ಅವರ ಕುಟುಂಬದವರ ಈ ದಾನವು ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಮುಸ್ಲಿಮರ ಸಹಾಯವಿಲ್ಲದಿದ್ದರೆ ಈ ಕನಸಿನ ಯೋಜನೆ ಸಾಕಾರಗೊಳ್ಳುವುದು ಕಷ್ಟಸಾಧ್ಯ ಎಂದು ಅವರು ಹೇಳಿದರು.
ಮಹಾವೀರ ಮಂದಿರ ಟ್ರಸ್ಟ್ ಈ ದೇವಸ್ಥಾನ ನಿರ್ಮಾಣಕ್ಕಾಗಿ ಇದುವರೆಗೆ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಟ್ರಸ್ಟ್ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಇನ್ನೂ 25 ಎಕರೆ ಭೂಮಿಯನ್ನು ಪಡೆಯಲಿದೆ.
ವಿರಾಟ್ ರಾಮಾಯಣ ಮಂದಿರವು ವಿಶ್ವಪ್ರಸಿದ್ಧ 12 ನೇ ಶತಮಾನದ ಕಾಂಬೋಡಿಯಾದ ದು 215 ಅಡಿ ಎತ್ತರದ ಅಂಕೋರ್ ವಾಟ್ ಸಂಕೀರ್ಣಕ್ಕಿಂತ ಎತ್ತರದ್ದಾಗಲಿದೆ. ಪೂರ್ವ ಚಂಪಾರಣ್ನಲ್ಲಿರುವ ಸಂಕೀರ್ಣವು ಎತ್ತರದ ಶಿಖರಗಳೊಂದಿಗೆ 18 ದೇವಾಲಯಗಳನ್ನು ಒಳಗೊಂಡಿರುತ್ತದೆ ಮತ್ತು ಅದರ ಶಿವ ದೇವಾಲಯವು ವಿಶ್ವದ ಅತಿದೊಡ್ಡ ಶಿವಲಿಂಗವನ್ನು ಹೊಂದಿರುತ್ತದೆ.
ಒಟ್ಟು ನಿರ್ಮಾಣ ವೆಚ್ಚ ಸುಮಾರು 500 ಕೋಟಿ ರೂ.ಗಳಾಗಿದ್ದು. ನವದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ತಜ್ಞರಿಂದ ಟ್ರಸ್ಟ್ ಶೀಘ್ರದಲ್ಲೇ ಸಲಹೆ ಪಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ