ಮೈಸೂರು: ರಾಜಕಾರಣಿಗಳು ಕೇಳಿದವರಿಗೆಲ್ಲ ಮೀಸಲಾತಿಯ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಸಂಸದ ಶ್ರೀನಿವಾಸ ಪ್ರಸಾದ ಅಭಿಪ್ರಾಯಪಟ್ಟಿದ್ದಾರೆ.
ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಲಯ ಏನು ನಿರ್ಧಾರ ತೆಗೆದುಕೊಂಡಿದೆ. ಕೇಂದ್ರದ ಅಧಿಕಾರವೇನು? ರಾಜ್ಯ ಸರಕಾರ ಏನು ಮಾಡಬೇಕೆಂಬ ಬಗ್ಗೆ ಯೋಚಿಸದೇ ಮೀಸಲಾತಿ ನೀಡುವ ಭರವಸೆ ನೀಡುತ್ತಿದ್ದಾರೆ ಎಂದರು.
ಕರ್ನಾಟಕದಲ್ಲಿ ಮೀಸಲು ವಿವಾದ ಭುಗಿಲೆದ್ದಿದ್ದು, ಹಾದಿ ಬೀದಿಯಲ್ಲಿ ಮೀಸಲಾತಿ ಕುರಿತು ಚರ್ಚೆ ನಡೆದಿರುವುದು ಬೇಸರದ ಸಂಗತಿ. ಈ ದೇಶದಲ್ಲಿ ಸಂವಿಧಾನ ಇದೆ. ಯಾವುದೇ ಜಾತಿಗೆ ಮೀಸಲಾತಿ ಕೊಡಬೇಕಾಗಿರುವುದು ಕೇಂದ್ರದ ಪರಮಾಧಿಕಾರ. ಎಲ್ಲೋ ಕೂತು ಶಕ್ತಿ ಪ್ರದರ್ಶನ ಮಾಡುವುದರಿಂದ ಮೀಸಲು ಪಡೆಯಲು ಸಾಧ್ಯವಿಲ್ಲ. ಮೀಸಲು ಕೊಡಬೇಕಾದರೆ ರಾಜ್ಯ ಸರಕಾರ ಸಮಿತಿ ರಚಿಸಿ ವರದಿ ನೀಡಬೇಕು. ಕೇಂದ್ರ ಸರಕಾರ ಅದನ್ನು ಅಧ್ಯಯನ ಮಾಡಬೇಕು. ನಂತರ ಸಂಸತ್ನಲ್ಲಿ ಚರ್ಚೆಯಾಗಿ ಅನುಮೋದನೆ ಪಡೆಯಬೇಕು. ಸಿಕ್ಕಸಿಕ್ಕವರೆಲ್ಲಾ ಮೀಸಲು ಕೇಳಿದರೆ ಕೊಡಲು ಬರುವುದಿಲ್ಲ ಎಂದು ಹೇಳಿದರು.
ಎಲ್ಲರೂ ಸಂವಿಧಾನದ ಬಗ್ಗೆ ತಿಳಿಯಬೇಕಾಗಿದೆ. ಇದಕ್ಕಾಗಿ ನಾಗಮೋಹನ್ ದಾಸ್ ಕನ್ನಡಕ್ಕೆ ಸಂವಿಧಾನ ಅನುವಾಸಿದ್ದಾರೆ. “ಸಂವಿಧಾನ ಓದು” ಎಂಬ ಪುಸ್ತಕವನ್ನು 30 ಸಾವಿರ ಪ್ರತಿ ಮುದ್ರಣ ಮಾಡಲಾಗುತ್ತಿದೆ. ಆ ಪ್ರತಿಗಳನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಸಂವಿಧಾನದಲ್ಲಿ ಏನಿದೆ ಎನ್ನುವುದನ್ನು ತಿಳಿಸಲಾಗುತ್ತದೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ