ಹೊಸ ತಂತ್ರಜ್ಞಾನದ ಮೂಲಕ ಖನಿಜ ಸಂಪತ್ತು ಸಮೀಕ್ಷೆ :ನಿರಾಣಿ

ಮಂಗಳೂರು: ಹೊಸ ತಂತ್ರಜ್ಞಾನದ ಮೂಲಕ ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಸಮೀಕ್ಷೆ ನಡೆಸಿ ಸಂರಕ್ಷಣೆ ಮಾಡುವ  ಚಿಂತನೆಯಿದೆ ಎಂದು ಗಣಿ ಮತ್ತು  ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಪ್ರವಾಸ ಮಂದಿರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಹಿಂದಿನ ಸರ್ಕಾರಗಳು ಹಳೆಯ ಪದ್ದತಿಯಲ್ಲಿ ಸಮೀಕ್ಷೆ ಮಾಡಿವೆ. ನಾವು ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಲಿದ್ದೇವೆ. ಇದರಿಂದ ನಿಖರವಾದ ಮಾಹಿತಿ ಸಿಗಲಿದೆ ಎಂದರು.
ಬೇರೆ  ರಾಜ್ಯಗಳಿಗೆ ಹೋಲಿಸಿದರೆ  ನಮ್ಮ ರಾಜ್ಯದಲ್ಲಿ ಸಾಕಷ್ಟು  ನೈಸರ್ಗಿಕ ಸಂಪನ್ಮೂಲಗಳಿವೆ. ಇದನ್ನು ವೈಜ್ಞಾನಿಕ ಆಧಾರದ ಮೇಲೆ ಸರ್ವೆ ನಡೆಸಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ತಪ್ಪಿತಸ್ಥರ ವಿರುದ್ದ ಕ್ರಮ: ಮಂಗಳವಾರ ನಡೆದ ಘಟನೆ ಕುರಿಂತೆ ಮಾತನಾಡಿದ ಅವರು,  ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಜಿಲಿಟಿನ್ ಪೂರೈಕೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಇದಕ್ಕಾಗಿ ಹೊಸ ಕಾನೂನನ್ನು ಜಾರಿ ಮಾಡುವ ಚಿಂತನೆಯೂ ಇದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು  ಅವಕಾಶ  ಕಲ್ಪಿಸುವ ಕಾನೂನನ್ನು ಜಾರಿ ಮಾಡುವ ಆಲೋಚನೆಯಿದೆ. ಮುಖ್ಯಮಂತ್ರಿ  ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯಾರಾದರೂ  ಅನಧಿಕೃತವಾಗಿ ಜಿಲೆಟಿನ್ ಕಡ್ಡಿಗಳನ್ನು ಸಾಗಿಸಿದ್ದು ಅಥವಾ ಸಂಗ್ರಹಿಸಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಕಲ್ಲು ಕ್ವಾರಿಗಳಲ್ಲಿ ಅನಧಿಕೃತವಾಗಿ ಜಿಲೆಟಿನ್ ಬಳಕೆ ಮಾಡದಂತೆ ಪತ್ತೆಹಚ್ಚಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ಶಿವಮೊಗ್ಗ ಹುಣಸೋಡು ಬಳಿ ಕಲ್ಲು ಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿ ಸ್ಫೋಟಗೊಂಡ ನಂತರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದರು. ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬಹುದೆಂಬ ಭೀತಿಯಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ವೇಳೆ ಸ್ಪೋಟವಾಗಿದೆ. ನನಗೆ ತಿಳಿದ ಪ್ರಕಾರ ಈ ಜಿಲೆಟಿನ್ ಕಡ್ಡಿಗಳನ್ನು ಶಿವಮೊಗ್ಗ ಘಟನೆಗೂ ಮುನ್ನವೇ ಸಂಗ್ರಹಿಸಡಲಾಗಿತ್ತು ಎಂಬ ಮಾಹಿತಿ ಇದೆ. ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿರುವುದರಿಂದ ನಾನು ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ  ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ನಡೆದ ಜಿಲೆಟಿನ್ ಸ್ಪೋಟ ಘಟನೆ ಅತ್ಯಂತ ದುರದೃಷ್ಟಕರ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಯಾರೇ ಇದ್ದರೂ ಸುಮ್ಮನೆ ಬಿಡುವುದಿಲ್ಲ. ತನಿಖಾ ವರದಿ ಬಂದ ನಂತರ ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದರು.
ತಮ್ಮ ದೆಹಲಿ ಭೇಟಿ ಕುರಿತಂತೆ  ಮಾತನಾಡಿದ ನಿರಾಣಿ, ನಾನು ದೆಹಲಿಗೆ ತೆರಳಿದ್ದು ನಿಜ, ವೈಯಕ್ತಿಕ ಕೆಲಸ ಮತ್ತು ಇಲಾಖೆಯ ಕೆಲಸದ ನಿಮಿತ್ತ ಹೋಗಿದ್ದೆ. ಯಾವುದೇ ರಾಷ್ಟ್ರೀಯ ನಾಯಕರು ನನ್ನನ್ನ ಕರೆಸಿರಲಿಲ್ಲ, ನಾನು ಯಾರನ್ನೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement