ಯತ್ನಾಳಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಲಿ: ರೇಣುಕಾಚಾರ್ಯ ಸವಾಲು

ದಾವಣಗೆರೆ : ಸಿಎಂ ಬದಲಾವಣೆ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಖಂಡಿಸಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ, ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡು ಎಂದು ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್ ಅವರಂಥ ಹಿರಿಯ ನಾಯಕರೇ ಹೊರತು ನಿನ್ನಂಥ ನಾಯಕರಲ್ಲ ಎಂದು ರೇಣುಕಾಚಾರ್ಯ ಯತ್ನಾಳ ವಿರುದ್ಧ ಹರಿಹಾಯ್ದಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಈ ರಾಜ್ಯದ ಜನತೆ ಮುಖ್ಯಮಂತ್ರಿ ಮಾಡಿದ್ದಾರೆ. ಇವರ ಆಶೀರ್ವಾದ ಇರುವವರೆಗೂ ಯಾರೂ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ಮಾತೆತ್ತಿದರೆ ವಾಜಪೇಯಿ ಹೆಸರೇಳಿ ನಾಟಕ ಮಾಡ್ತಿದ್ದೀರಾ? ಎಂದು ಯತ್ನಾಳ್ ವಿರುದ್ಧ ಕೆರಳಿದ ರೇಣುಕಾಚಾರ್ಯ, ಬೆಳಗಾವಿ ಲೋಕಸಭೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿರುವ ಯತ್ನಾಳ ನಿಜವಾದ ಬಿಜೆಪಿಯವನಲ್ಲ. ಯತ್ನಾಳ ಮುಖ್ಯಮಂತ್ರಿ ವಿರುದ್ಧ ಮಾತನಾಡಲು ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿರಬೇಕು ಎಂದು ಆರೋಪಿಸಿದ ರೇಣುಕಾಚಾರ್ಯ, ಯತ್ನಾಳ ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಪಕ್ಷ ಮತ್ತು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿರುವ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲು ನಾವು ಒತ್ತಾಯ ಮಾಡಿದ್ದೇವೆ. ಸೋಮವಾರ ಮತ್ತೆ ಎಲ್ಲ ಶಾಸಕರು ಸಭೆ ಸೇರಿ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement