ಹಾವೇರಿ: ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ನೌಕರನೊಬ್ಬ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆಯ ೧೫೦ ಅಡಿ ಎತ್ತರದ ಚಿಮಣಿ ಏರಿದ ಘಟನೆ ಶುಕ್ರವಾರ ನಡೆದಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಬೋರೇಗೌಡ ಆತ್ಮಹತ್ಯೆ ಬೆದರಿಕೆ ಹಾಕಿದನು. ಶುಕ್ರವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಚಿಮಣಿ ಏರಿದ ಬೋರೇಗೌಡ ನನಗೆ ನ್ಯಾಯ ಸಿಗದಿದ್ದರೆ ನಾನು ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ.
೨೦೧೧ರಿಂದ ೨೦೧೮ರವರೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದು, ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಲ್ಲದೇ ಒತ್ತಾಯಪೂರ್ವಕವಾಗಿ ರಾಜಿನಾಮೆ ಬರೆಸಿಕೊಂಡು ಕೆಲಸದಿಂದ ತೆಗೆದುಹಾಕಿದ್ದರು ಎಂದು ಆರೋಪ ಮಾಡಿದ. ನನ್ನ ಕುಟುಂಬ ಸಂಕಷ್ಟದಲ್ಲಿದೆ. ಮೂರು ವರ್ಷಗಳ ಸಂಬಳ ನೀಡಬೇಕು. ಮತ್ತೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ.
ಮಾಹಿತಿ ತಿಳಿದ ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದರು. ಬೋರೇಗೌಡನ ಪತ್ನಿ ಹಾಗೂ ಮಕ್ಕಳನ್ನು ಸ್ಥಳಕ್ಕೆ ಕರೆಸಲಾಯಿತು. ಮತ್ತೆ ಉದ್ಯೋಗ ನೀಡುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿ ಭರವಸೆ ನೀಡಿದ ನಂತರ ಬೋರೆಗೌಡನ ಮನವೊಲಿಸಿದ ನಂತರ ಆತ ಕೆಳಗಿಳಿದು ಬಂದ.
ನಿಮ್ಮ ಕಾಮೆಂಟ್ ಬರೆಯಿರಿ