ಗದಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭ: ಕಳಪೆ ಬಿತ್ತನೆ ಬೀಜ ಮಾರಾಟವಾಗದಂತೆ ಕ್ರಮಕ್ಕೆ ಸೂಚನೆ  

ಗದಗ : ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ರೈತರಿಗೆ ಬಿತ್ತನೆಗೆ ಅಗತ್ಯವಿರುವ ಬೀಜ ಗೊಬ್ಬರ ಕಳಪೆ ಪೂರೈಕೆಯಾಗದಂತೆ ಕೃಷಿ ಇಲಾಖಾಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.
ನರಗುಂದದ ಗೃಹ ಕಚೇರಿಯಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಿಯಂತ್ರಿತ ಕೃಷಿ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಹ ರೈತರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳು ದೊರೆಯುವಂತೆ ಕ್ರಮ ಕೈಗೊಳ್ಳಾಗಿದೆ. ರೈತರಿಗೆ ನಿಗದಿತ ದರದಲ್ಲಿ ಬೀಜ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧಗಳು ದೊರೆಯುವಂತೆ ಕೃಷಿ ಮತ್ತು ತೋಟಗಾರಿಕೆ  ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ರೈತರಿಗೆ ಸುಲಭವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ದೊರಕುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಗೊಂದಲ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಗ್ರಾಮೀಣ ಭಾಗದಿಂದ ನಗರಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಆಗಮಿಸುವ ರೈತರು ಕೊರೊನಾ ಸೋಂಕಿನ ಮಾರ್ಗಸೂಚಿಗಳನ್ನು ಪಾಲಿಸಬೇಕು. ರಸಗೊಬ್ಬರ ಹಾಗೂ ಬಿತ್ತನ ಬೀಜ ಅಂಗಡಿಗಳಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯವಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ರಸಗೊಬ್ಬರಗಳಾದ ಡಿಎಪಿ  ಪ್ರತಿ ಚೀಲಕ್ಕೆ 1200, ಕಾಂಪ್ಲೆಕ್ಸ್ 16-20-13 ಪ್ರತಿ ಚೀಲಕ್ಕೆ 1050, ಕಾಂಪ್ಲೆಕ್ಸ್ 15-15-15 ಪ್ರತಿ ಚೀಲಕ್ಕೆ 1150,  ಅದೇ ರೀತಿ ಯೂರಿಯಾ ಪ್ರತಿ ಚೀಲಕ್ಕೆ 266 ರೂ, ಗರಿಷ್ಠ  ಮಾರಾಟ ಬೆಲೆ ನಿಗದಿಪಡಿಸಲಾಗಿದೆ. ರಸಗೊಬ್ಬರ ಮಾರಾಟಗಾರರಿಗೆ ಗರಿಷ್ಠ ಮಾರಾಟ ಬೆಲೆ ಮೀರಿ ಮಾರಾಟ ಮಾಡಲು ಸೂಚಿಸಲಾಗಿದೆ ಎಂದರು.
2021ನೇ ಸಾಲಿನ ಮುಂಗಾರು ಬಿತ್ತನೆ ಬೀಜದ ಲಭ್ಯತೆಗೆ  ಸಂಬಂಧಿಸಿದಂತೆ ಮಾಹಿತಿ ನೀಡಿ ಹೈಬ್ರೀಡ್ ಜೋಳ ವಿವಿಧ ತಾಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ  75 ಕ್ವಿಂಟಲ್, ಮುಸುಕಿನ ಜೋಳ 3286 ಕ್ವಿಂಟಲ್, ಸಜ್ಜೆ 190 ಕ್ವಿಂಟಲ್, ಹೆಸರು 721 ಕ್ವಿಂಟಲ್, ತೊಗರಿ 100 ಕ್ವಿಂಟಲ್ , ಶೇಂಗಾ 406 ಕ್ವಿಂಟಲ್ , ಸೂರ್ಯಕಾಂತಿ 171 ಕ್ವಿಂಟಲ್ , ಹೈಬ್ರೀಡ್ ಹತ್ತಿ  52072(ಪ್ಯಾಕೆಟ್)  ಜಿಲ್ಲೆಯಲ್ಲಿ ಸಂಗ್ರಹವಿದೆ.  ಪ್ರಸಕ್ತ ಸಾಲಿನ ಮುಂಗಾರಿಗೆ ಅಗತ್ಯವಿರುವ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು , ಜಿಪಂ ಸಿಇಒ ಭರತ್ ಎಸ್, ತೋಟಗಾರಿಕೆ ಹಿರಿಯ ಅಧಿಕಾರಿಗಳು ಸೇರಿದಂತೆ ತಾಲೂಕಾ ಕೃಷಿ ಅಧಿಕಾರಿಗಳು  ಹಾಜರಿದ್ದರು.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement