ಭಾರೀ ಖೋಟಾ ನೋಟು ಜಾಲ ಪತ್ತೆ; 72 ಲಕ್ಷ ರೂ.ನಕಲಿ ನೋಟು ವಶಕ್ಕೆ ಪಡೆದ ಪೊಲೀಸರು

ಕಾರವಾರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ದಾಂಡೇಲಿ ತಾಲೂಕಿನ ಭರ್ಚಿಯಲ್ಲಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿದ್ದ ಆರು ಆರೋಪಿಗಳನ್ನು ಕಾರು ಹಾಗೂ 72 ಲಕ್ಷ ಖೋಟಾ ನೋಟು ಮತ್ತು 4.50 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ,ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿ ಚೆಕ್ ಪೋಸ್ಟ್ ನಲ್ಲಿ ಅನುಮಾನಾಸ್ಪದ ಕಾರನ್ನು ತಡೆದ ಪೊಲೀಸರು, ಪರಿಶೀಲನೆಗೆ ಮುಂದಾದಾಗ ಕಾರು ರತ್ನಗಿರಿ ಕಡೆಯಿಂದ ಬಂದಿದೆ ಎನ್ನುವುದು ತಿಳಿದುಬಂದಿದೆ. ಪೊಲೀಸರಿಗೆ ತಮ್ಮ ಮೇಲೆ ಅನುಮಾನ ಬಂದಿದೆ ಎನ್ನುವುದು ಗೊತ್ತಾಗುತ್ತಲೇ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಒಬ್ಬ ಕಾರು ಬಾಗಿಲು ತೆರೆದು ಓಡಿ ಹೋಗಿದ್ದಾನೆ. ತಕ್ಷಣ ಪೊಲಿಸರು ಕಾರನ್ನು ಸುತ್ತುವರೆದು ಪರಿಶೀಲಿಸಿದಾಗ ಕಾರಿನಲ್ಲಿ ಭಾರೀ ಮೊತ್ತದ ನೋಟಿನ ಕಂತೆಗಳು ಇರುವುದು ಪತ್ತೆ ಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಹಿಂಬದಿಯಲ್ಲಿ ಮತ್ತೊಂದು ಕಾರು ಬಂದಿದ್ದು, ಅದರಲ್ಲಿಯೂ ಇಬ್ಬರು ಆರೋಪಿಗಳಿದ್ದು, ಅವರನ್ನೂ ವಶಕ್ಕೆ ಪಡೆದು ವಿಚಾರಿಸಿದ್ದಾರೆ. 9 ಲಕ್ಷ ಮೌಲ್ಯದ ನಕಲಿ ನೋಟು ನೀಡಲು ಪ್ಲಾನ್ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಂಧಿತ ಆರೋಪಿಗಳನ್ನು ತೀವ್ರತರದ ವಿಚಾರಣೆಗೆ ಒಳಪಡಿಸಿದಾಗ ಇನ್ನೂ 62 ಲಕ್ಷ ಮೊತ್ತದ ಖೋಟಾ ನೋಟು ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಕಿರಣ ದೇಸಾಯಿ, ಗಿರೀಶ ಪೂಜಾರಿ, ಬೆಳಗಾವಿಯ ಅಮರ ನಾಯ್ಕ, ಸಾಗರ ಕುಣ್ಣೂರ್ಕರ್, ದಾಂಡೇಲಿಯ ಶಬ್ಬೀರ್ ಕುಟ್ಟಿ ಹಾಗೂ ಶಿವಾಜಿ ಶ್ರವಣ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಖೋಟಾ ನೋಟು ಪ್ರಕರಣ ಎನ್ನಬಹುದಾದ ಈ ಪ್ರಕರಣವನ್ನು ಬೇಧಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ದಾಂಡೇಲಿ ಡಿಎಸ್ಪಿ ಗಣೇಶ, ಸಿಪಿಐ ಪ್ರಭು, ಗ್ರಾಮೀಣ ಠಾಣೆಯ ಪಿಎಸ್‌ಐ ಗಾಡೇಕರ್, ಪಿಎಸ್‌ಐ ಯಲ್ಲಾಲಿಂಗ, ನಗರ ಠಾಣೆಯ ಪಿಎಸ್‌ಐ ಯಲ್ಲಪ್ಪ ಹಾಗೂ ದಾಂಡೇಲಿ ಗ್ರಾಮೀಣ ಮತ್ತು ನಗರ ಠಾಣೆಯ ಎಲ್ಲಾ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರಶಂಸಿಸಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement