ನಾನು ಸಚಿನಾಗಿರುವವರೆಗೂ ಅಪವಾದ ಹೊತ್ತವರು ಕುಲಪತಿಯಾಗಲು ಸಾಧ್ಯವಿಲ್ಲ:ಡಾ.ಸುಧಾಕರ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ತುಂಬುವ ಬಗ್ಗೆ ಚರ್ಚಿಸಲಾಗುವುದು. ಅನುಮಾನಕ್ಕೂ ಅವಕಾಶವಿಲ್ಲದ ಶುದ್ಧ ಚಾರಿತ್ರ್ಯವಿರುವ ವ್ಯಕ್ತಿ ಮಾತ್ರ ಕುಲಪತಿಯಾಗಲು ಯೋಗ್ಯವೇ ಹೊರತು ಅಪವಾದ ಹೊತ್ತುಕೊಂಡವರು ಕುಲಪತಿ ಕುರ್ಚಿಯಲ್ಲಿ ಕೂರಲು ನಾನು ಸಚಿವನಾಗಿರುವವರೆಗೂ ಸಾಧ್ಯವಿಲ್ಲ ಎಂದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚಿಸಬೇಕಾಗಿತ್ತು. ಆದರೆ ಕೋವಿಡ್ ನಿಂದಾಗಿ ರಾಜ್ಯಪಾಲರ ಜೊತೆ ಚರ್ಚೆ ನಡೆಸಲು ಆಗಿಲ್ಲ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ರಾಜ್ಯಪಾಲರ ಭೇಟಿಗೆ ಸಮಯ ಕೇಳಿ ನಂತರ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಅವರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ರೋಗ ಬಾರದಂತೆ ತಡೆಯುವ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು
ಅಲೋಪತಿಯಲ್ಲಿ ಸಂಶೋಧನೆಗಳನ್ನು ಮಾಡುವಂತೆ ಆಯುರ್ವೇದದಲ್ಲೂ ಹೆಚ್ಚು ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಎಷ್ಟೇ ನಂಬಿಕೆ ಇದ್ದರೂ ಅದನ್ನು ಸಾಕ್ಷಿ ಸಮೇತ ನಿರೂಪಿಸಬೇಕು. ಸಂಶೋಧನೆ ಮತ್ತು ಆವಿಷ್ಕಾರವನ್ನು ಹೆಚ್ಚಾಗಿ ಮಾಡಬೇಕು. ಪ್ರತಿ ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಸಂಶೋಧನೆಗಳನ್ನು ಹೆಚ್ಚಿಸಬೇಕಿದೆ.ಯಾವುದೇ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸಂಶೋಧನೆ ಅಗತ್ಯ ಎಂದರು.
ಆಕ್ಸಫರ್ಡ್ ವಿಶ್ವವಿದ್ಯಾಲಯ ಕೋವಿಡ್ ಲಸಿಕೆ ತಯಾರಿಸಿದೆ. ಅದೇ ರೀತಿ, ರಾಜೀವ್ ಗಾಂಧಿ ವಿವಿ ಕೂಡ ಯಾವುದೇ ರೋಗಗಳಿಗೆ ಪರಿಹಾರ ಕಂಡುಹಿಡಿಯುವಂತೆ ಸಂಶೋಧನೆ ನಡೆಯಬೇಕು. ಎನ್‍ಸಿಡಿ ಸಮಸ್ಯೆಯಿಂದಾಗಿ ಬಡ ರಾಷ್ಟ್ರಗಳಲ್ಲಿ ವಾರ್ಷಿಕ 28 ದಶಲಕ್ಷ ಜನರು ಮೃತರಾಗುತ್ತಿದ್ದಾರೆ. ಭಾರತದಲ್ಲಿ ಕೂಡ ಈ ಸಮಸ್ಯೆ ಹೆಚ್ಚಿದೆ.ಈ ರೋಗಗಳಿಗೆ ಆಯುರ್ವೇದ ಪದ್ಧತಿ ಹೆಚ್ಚು ಪರಿಹಾರ ನೀಡುತ್ತದೆ ಎಂದರು.
ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ರಾಂಡಮ್ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಅನ್ ಲಾಕ್ ಹಂತದಲ್ಲೇ ಬಹಳಷ್ಟು ಜನರು ಹೊರಗೆ ಓಡಾಡುತ್ತಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪರೀಕ್ಷೆ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು. ರಾಜ್ಯದಲ್ಲಿ 1.70 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.
ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡಲಾಗಿರುತ್ತದೆ. ಕೋವಿಡ್ ಮೂರನೇ ಅಲೆಗೆ ಸಿದ್ಧತೆಯಾಗಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ವಿಭಾಗ ಬಲಪಡಿಸಲಾಗುತ್ತಿದೆ. 1,763 ವೈದ್ಯರು, ವೈದ್ಯಾಧಿಕಾರಿಗಳನ್ನು ಐತಿಹಾಸಿಕದಂತೆ ಅತಿ ಕಡಿಮೆ ಅವಧಿಯಲ್ಲಿ ನೇಮಿಸಲಾಗಿದೆ.
ವೈದ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಕಡಿಮೆ. ವೈದ್ಯರು ನಗರಗಳಲ್ಲೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಚ್ಚಿನ ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡುವ ಛಲ ಹೊಂದಬೇಕು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement