ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗುವಂತಹ ಯಾವ ರೋಗಿಗಳಿಗೆ ವೆಂಟಿಲೇಟರ್ ಹಾಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ ಎನ್ನುವುದನ್ನು ಪತ್ತೆ ಹಚ್ಚಲು ಸಹಕಾರಿಯಾಗುವಂತಹ ಕೋವಿಡ್ ಸೆವೆರಿಟಿ ಸ್ಕೋರ್ ಎಂಬ ಹೊಸ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ಸಾಫ್ಟ್ವೇರಿನಲ್ಲಿ ಸೋಂಕಿನ ತೀವ್ರತೆ ಮೌಲ್ಯಮಾಪನ ಮಾಡುವ ತಂತ್ರಾಂಶ ಅಳವಡಿಸಲಾಗಿದೆ. ಅದರ ಸಹಾಯದಿಂದ ಯಾವ ರೋಗಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. ಯಾರಿಗೆ ವೆಂಟಿಲೇಟರ್ ಬೇಕಾಗಿದೆ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಹೇಳಲಾಗಿದೆ.
ಐಸಿಯು ಹಾಗೂ ತುರ್ತು ಘಟಕಗಳಲ್ಲಿರುವ ರೋಗಿಗಳ ತಪಾಸಣೆ ನಡೆಸಿ ಅವಶ್ಯಕತೆ ಇಲ್ಲದವರನ್ನು ಡಿಸ್ಚಾರ್ಜ್ ಮಾಡುವುದರಿಂದ ಬೆಡ್ಗಳ ಅಭಾವ ತಪ್ಪಿಸಬಹುದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಹೊಸ ಸಾಫ್ಟ್ ವೇರ್ ರೋಗಿಯ ಲಕ್ಷಣಗಳು, ರೋಗದ ತೀವ್ರತೆ, ಪರೀಕ್ಷಾ ವರದಿಗಳು ಹಾಗೂ ರೋಗಿ ಇತರ ರೋಗ ಲಕ್ಷಣಗಳಿಂದ ನರಳುತ್ತಿದ್ದರೆ ಅದನ್ನು ಪತ್ತೆ ಹಚ್ಚಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
ಈಗ ಈ ಸಾಫ್ಟ್ವೇರ್ ಅನ್ನು ಕೋಲ್ಕತ್ತಾದ ಮೂರು ಕೋವಿಡ್ ಕೇರ್ ಸೆಂಟರುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ದೇಶದೆಲ್ಲೆಡೆ ವಿಸ್ತರಣೆ ಮಾಡಿ ತಂತ್ರಾಂಶ ಬಳಕೆ ಕುರಿತಂತೆ ಕೊರೊನಾ ವಾರಿಯರ್ಸ್ಗಳಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ