ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಪ್ರಾಬಲ್ಯದ 11 ಗ್ರಾಮಗಳ ಹೆಸರು ಬದಲಿಸಿದ ಕೇರಳ ಸರ್ಕಾರ..!

ಮಂಗಳೂರು: ಕೇರಳ ಗಡಿಭಾಗದಲ್ಲಿ ಕೇರಳ ಸರ್ಕಾರ ಕನ್ನಡದ ವಿರುದ್ಧ ಮತ್ತೆ ಮಲತಾಯಿ ಧೋರಣೆ ಅನುಸರಿಸಿದೆ. ಈ ಹಿಂದೆ ಕರ್ನಾಟಕದ ಭಾಗವೇ ಆಗಿದ್ದ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡ ಪ್ರಾಬಲ್ಯದ 11 ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಭಾಷಾಂತರ ಮಾಡಿ ಹೆಸರಿಸಿದೆ.
ಈ ಹಿಂದೆಯೂ ಗಡಿಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಅಳವಡಿಸುವ ಆದೇಶ ನೀಡಿದ್ದ ಕೇರಳ ಸರ್ಕಾರ ಈಗ ಮತ್ತೆ ಗ್ರಾಮಗಳ ಹೆಸರನ್ನು ಬದಲಾಯಿಸುವ ಮೂಲಕ ಗಡಿಭಾಗದ ಕನ್ನಡಿಗರ ವಿರುದ್ಧ ಸವಾರಿ ಮಾಡಲು ಹೊರಟಿದೆ.
ಈ ಬಗ್ಗೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ 11 ಗ್ರಾಮಗಳು ಅನೇಕ ಶತಮಾನಗಳ ಇತಿಹಾಸವನ್ನು ಸೂಚಿಸುವ ದ್ಯೋತಕವಾಗಿದ್ದು ,ಈಗ ಮಲಯಾಳಂಗೆ ಭಾಷಾಂತರ ಮಾಡಿದರೆ, ಭಾಷೆಯ ಜೊತೆಗೆ ಸಂಸ್ಕೃತಿಗೂ ಅಪಚಾರವಾಗುವ ಆತಂಕ ವ್ಯಕ್ತವಾಗಿದೆ.
ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಮಧೂರು ಎಂಬ ಗ್ರಾಮವನ್ನು ಮಧುರಂ, ಕಾರಡ್ಕವನ್ನು ಕಡಗಮ್, ಪಿಳಿಕುಂಜೆಯನ್ನು ಪಿಳಿಕುನ್ನು, ಮಂಜೇಶ್ವರವನ್ನು ಮಂಜೇಶ್ವರಂ, ಕುಂಬಳವನ್ನು ಕುಂಬ್ಳಾ, ನೆಲ್ಲಿಕುಂಜವನ್ನು ನೆಲ್ಲಿಕುನ್ನಿ, ಮಲ್ಲಅನ್ನು ಮಲ್ಲಂ, ಬೇದಡ್ಕವನ್ನು ಬೇಡಗಮ್, ಆನೆಬಾಗಿಲುವನ್ನು ಆನೆವಾಗಿಲ್, ಹೊಸದುರ್ಗವನ್ನು ಪುದಿಯಕೋಟ, ಸಸಹಿತ್ಲುವನ್ನು ಶೈವಲಖ್ ಎಂಬುವುದಾಗಿ ಬದಲಾಯಿಸಲು ತೀರ್ಮಾನ ಮಾಡಿದೆ.
ಹಲವು ಭಾಗದಲ್ಲಿ ಭಾಷಾಂತರಗೊಂಡ ಹೆಸರಿನ ಬೋರ್ಡ್ ಕೂಡಾ ಹಾಕಲಾಗಿದ್ದು, ಕನ್ನಡಿಗರನ್ನು ಕೆರಳಿಸಿದೆ. ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡದ ದೌರ್ಜನ್ಯ ವಿರುದ್ಧ ಕರ್ನಾಟಕ ಸರ್ಕಾರದ ಮಧ್ಯಪ್ರವೇಶಕ್ಕೆ ಅಲ್ಲಿನ ಕನ್ನಡಿಗರು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement