ಬೆಂಗಳೂರು: ಲಿಥಿಯನ್ -ಅಯಾನ್ ಸೆಲ್ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4ವಿ ರಾಜ್ಯದಲ್ಲಿ 4 ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿರುವುದು, ರಾಜ್ಯದ ಎಲೆಕ್ಟ್ರಿಕ್ ಸೆಲ್ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವವಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ವಿಶ್ವದ ಪ್ರಮುಖ ಲಿಥಿಯನ್ -ಅಯಾನ್ ಸೆಲ್ (Li-Ion) ಸೆಲ್ ಉತ್ಪಾದನಾ ಕಂಪನಿಯ ಪ್ರತಿನಿಧಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು, ಸಿ4ವಿ ಕಂಪನಿ ನೂರಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿರುವ ಹಾಗೂ ಲಿಥೀಯಮ್ ಬ್ಯಾಟರಿ ಸೆಲ್ ಉತ್ಪಾದನೆ ಹಾಗೂ ತಂತ್ರಜ್ಞಾನ ಹೊಂದಿರುವ ಪ್ರಮುಖ ಕಂಪನಿಯಾಗಿದೆ. ರಾಜ್ಯದಲ್ಲಿ ಈ ಕಂಪನಿಯ 4015 ಕೋಟಿ ರೂ.ಗಳ ಹೂಡಿಕೆಯಿಂದಾಗಿ ಸುಮಾರು 4 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಕಂಪನಿ ರಾಜ್ಯದಲ್ಲಿ 5 GWh ಪ್ಲಾಂಟನ್ನು ಸ್ಥಾಪಿಸಲಿದ್ದು, ಮುಂದಿನ ವರ್ಷ ಇದರ ಕಾಮಗಾರಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಇತ್ತೀಚಿಗೆ ಹೊರತಂದಿರುವ ನೂತನ ಇಎಸ್ಡಿಎಂ ನೀತಿ ಹಾಗೂ ಎಲೆಕ್ಟ್ರಿಕ್ ವೆಹಿಕಲ್ ನೀತಿಯಲ್ಲಿನ ಅಮೂಲಾಗ್ರ ಬದಲಾವಣೆಯ ಮೂಲಕ ಹಸಿರು ಭವಿಷ್ಯಕ್ಕೆ ಮುನ್ನಡಿ ಬರೆಯಲಾಗಿದೆ.
ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೆಲ್ ಉತ್ಪಾದನಾ ಕ್ಷೇತ್ರ ಪ್ರಮುಖ ಪಾತ್ರವಹಿಸಲಿದೆ. ಪ್ರಮುಖ ಕಂಪನಿ ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಿರುವುದರಿಂದ ಇನ್ನಷ್ಟು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರಾಜ್ ಕುಮಾರ್ ಖತ್ರಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಸಿ4ವಿ ಕಂಪನಿಯ ಸಿಇಓ ಶೈಲೇಶ್ ಉಪ್ರೇತಿ, ಉಪಾಧ್ಯಕ್ಷ ಕುಲದೀಪ್ ಗುಪ್ತಾ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಇನ್ವೆಸ್ಟ್ ಕರ್ನಾಟಕ ಫೋರಂ ನ ಸಿಓಓ ಬಿ.ಕೆ ಶಿವಕುಮಾರ್ ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ