ಕಾಲೇಜು ಉಪನ್ಯಾಸಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕಟವಾಗಿದೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಕುರಿತು ಮಾಹಿತಿ ನೀಡಿದ್ದು, ಜುಲೈ 16ರಂದು ಸಾಮಾನ್ಯ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟವಾಗಲಿದ್ದು, ಜುಲೈ 27ರಿಂದ 3 ದಿನಗಳ ಕಾಲ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅವರು, ಈ ವರ್ಗಾವಣೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಬೋಧಕರು ತಮಗೆ ಸೂಕ್ತವೆನಿಸುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಪಾರದರ್ಶಕ ಗಣಕೀಕೃತ ಕೌನ್ಸಿಲಿಂಗ್‌ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.
ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನವಾಗಿದ್ದು, ಜುಲೈ 16ರಂದು ಆದ್ಯತಾ ಪಟ್ಟಿ ಪ್ರಕಟಿಸಲಾಗುವುದು. ಜುಲೈ 20ರಂದು ವಿಶೇಷ ಪ್ರಕರಣಗಳ ಆದ್ಯತಾ ಪಟ್ಟಿ ಪ್ರಕಟವಾಗಲಿದೆ. ಜುಲೈ 22ರಂದು ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸಿಲಿಂಗ್ ಹಾಗೂ 27ರಿಂದ 29ರ ವರೆಗೆ ಸಾಮಾನ್ಯ ಅಭ್ಯರ್ಥಿಗಳ ಕೌನ್ಸಿಲಿಂಗ್ ನಡೆಯಲಿದೆ.
ಪ್ರಸ್ತುತ ರೂಪಿಸಿರುವ ವರ್ಗಾವಣೆ ನಿಯಮಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಐದು ವಲಯಗಳಲ್ಲಿ ವಿಂಗಡಿಸಿ ವಲಯಮುಕ್ತ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ವರ್ಗಾವಣೆ ನಿಯಮದ ಪ್ರಮುಖ ಅಂಶ ; ಒಟ್ಟು ಬೋಧಕ ಹುದ್ದೆಗಳ ಪೈಕಿ ಶೇ.15ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಶೇ.9ರಷ್ಟು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಹಾಗೂ ಶೇ.6ರಷ್ಟು ವಿಶೇಷ ಪ್ರಕರಣಗಳಿಗೆ ಅಂದರೆ; ವಿಕಲಚೇತನರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ವಿಧವೆಯರು, ಏಕ ಪೋಷಕರು, ವಿಚ್ಛೇದಿತ ಮಹಿಳೆಯರು, ಪತಿ-ಪತ್ನಿ ಪ್ರಕರಣಗಳಿಗೆ ವಿಶೇಷ ಅವಕಾಶ ನಿಗದಿಪಡಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್‌ನಲ್ಲೂ ಇವರಿಗೆ ಆದ್ಯತೆ ನೀಡಲಾಗುಗುತ್ತದೆ.
ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹ ಬೋಧಕರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ನಿಯಮಾನುಸಾರ ದಾಖಲಾತಿಗಳ ಪರಿಶೀಲನೆಯ ನಂತರ ವರ್ಗಾವಣೆಯಲ್ಲಿ ನಿಯಮಗಳಲ್ಲಿ ನಿರ್ಬಂಧಿಸಿರುವ ಶೇ.6ರ ಮಿತಿಯೊಳಗೆ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮ-2021 ರೂಪಿಸಿ ಜಾರಿಗೊಳಿಸಲಾಗುತ್ತಿದೆ.
ಬೆಂಗಳೂರು ಮಹಾನಗರ-ವಲಯ ಎ, ಎಲ್ಲಾ ಮಹಾನಗರ ಪಾಲಿಕೆಗಳನ್ನು ಹೊಂದಿರುವ ನಗರಗಳು (ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು) ವಲಯ ಬಿ, ಜಿಲ್ಲಾ ಕೇಂದ್ರಗಳು ಹಾಗೂ ನಗರಸಭೆಗಳನ್ನು ಹೊಂದಿರುವ ನಗರಗಳು-ವಲಯ ಸಿ, ಎಲ್ಲಾ ತಾಲೂಕು ಕೇಂದ್ರಗಳು ಹಾಗೂ ಪುರಸಭೆಗಳನ್ನು ಹೊಂದಿರುವ ಪಟ್ಟಣಗಳು-ವಲಯ ಡಿ, ಹಾಗೂ ಉಳಿದ ಎಲ್ಲಾ ಪ್ರದೇಶಗಳು-ವಲಯ ಇ ಎಂದು ವಿಂಗಡಿಸಲಾಗಿದೆ.
ಒಂದೇ ವಲಯದ ಹಲವು ಕಾಲೇಜುಗಳಲ್ಲಿ ಕರ್ತವ್ಯ ಬೋಧಕರು ವಲಯದ ಜೇಷ್ಠತೆಯಲ್ಲಿ ಪದೇಪದೆ ವರ್ಗಾವಣೆಗೆ ಒಳಪಡುವುದನ್ನು ತಪ್ಪಿಸಲು, ಒಂದು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅವಧಿಯನ್ನು ಪರಿಗಣಿಸಿ, ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಬೋಧಕರ ವಲಯವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್ ನೋಡಬಹುದು.
ಎಲ್ಲ ವಲಯಗಳ ಬೋಧಕರಿಗೆ ಸಮಾನ ಅವಕಾಶ ನೀಡುವ ಸಲುವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕ್ರಮವಾಗಿ ವಲಯ-ಬಿ ಯಿಂದ ಪ್ರಾರಂಭಿಸಿ, ನಂತರದಲ್ಲಿ ವಲಯ-ಸಿ, ವಲಯ-ಡಿ, ವಲಯ-ಇ ಮತ್ತು ವಲಯ-ಎ ಯಿಂದ ನಡೆಸಲಾಗುವುದು ಮತ್ತು ವಲಯ ಮುಕ್ತ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement