ಬೆಂಗಳೂರು: ಬಿಜೆಪಿಯಲ್ಲಿನ ಶಾಸಕರು, ಸಚಿವರು ಪರ ವಿರೋಧ ಹೇಳಿಕೆಗಳನ್ನು ನೀಡುವುದಲ್ಲದೇ ಮುಖ್ಯಮಂತ್ರಿ ಬದಲಾವಣೆಗೂ ಒತ್ತಾಯ ಮಾಡಿದ್ದರು. ಇವುಗಳಿಂದ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕುಂದಿದ್ದು, ಆಡಳಿತ ಪಕ್ಷದ ಸಚಿವರು -ಶಾಸಕರ ಗುದ್ದಾಟದಿಂದ ಧಕ್ಕೆಯಾಗಿರುವ ಬಿಜೆಪಿ ಸರ್ಕಾರದ ವರ್ಚಸ್ಸನ್ನು ಮರು ಸ್ಥಾಪಿಸಲು ಸಿಎಂ ಯಡಿಯೂರಪ್ಪ ಆಪ್ತ ಸಚಿವರು ಮತ್ತೆ ಟೆಂಪಲ್ ರನ್ ಆರಂಭಿಸಿದ್ದಾರೆ.
ಯಡಿಯೂರಪ್ಪ ಸಂಪುಟದ ಕೆಲವು ಸಚಿವರು ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡಿ ಸರ್ಕಾರದ ವರ್ಚಸ್ಸು ಹಾಗೂ ಘನತೆಯನ್ನು ಮರು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಬೆಂಗಳೂರಿನಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು. ಬುಧವಾರ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಹಾಗೂ ಒಕ್ಕಲಿಗ ಮುಖಂಡ ಆರ್ ಅಶೋಕ್ ಇಬ್ಬರು ಯಡಿಯೂರಪ್ಪ ನಿಷ್ಠರು. ಹೀಗಾಗಿ ಇಬ್ಬರು ಸಚಿವರು ಯಡಿಯೂರಪ್ಪ ನಾಯಕತ್ವವನ್ನು ಬೆಂಬಲಿಸುವಂತೆ ಮಠಗಳ ಸಹಕಾರ ಕೋರಲು ಮುಂದಾಗಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ನೀಡುತ್ತಿದ್ದ ಹೇಳಿಕೆಗಳಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಕೇಂದ್ರ ನಾಯಕರು ಸೂಚಿಸಿದ ಕೂಡಲೇ ತಾವು ಅಧಿಕಾರದಿಂದ ಕೆಳಗಿಳಿಯುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಈ ಹೇಳಿಕೆ ನಂತರ ರಾಜ್ಯದ ೧೭ ಲಿಂಗಾಯತ ಮಠಗಳು ಯಡಿಯೂರಪ್ಪ ಪರ ಬೆಂಬಲ ಸೂಚಿಸಿದ್ದವು.
ಮುಂದಿನ ವಾರದಲ್ಲಿ ಉಡುಪಿ ಮತ್ತು ಉತ್ತರ ಕರ್ನಾಟಕದ ಕೆಲವು ಮಠಗಳಿಗೂ ಸಹ ಭೇಟಿ ನೀಡಲಿದ್ದಾರೆ. ಯಾವುದೇ ಜಾತಿ ಮತ ನೋಡದೇ ರಾಜ್ಯದಲ್ಲಿರುವ ಎಲ್ಲಾ ಮಠಗಳಿಗೂ ಭೇಟಿ ನೀಡುವ ಮೂಲಕ ಜನರನ್ನು ತಲುಪುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರವಾಹ ಮತ್ತು ಕೋವಿಡ್ನ ಕಠಿಣ ಪರಿಸ್ಥಿತಿಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರವನ್ನು ಹಂಚಿಕೊಳ್ಳುತ್ತೇವೆ, ರಾಜ್ಯದಲ್ಲಿ ಕೊರೋನಾ ಕೇಸ್ ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ವೇಳೆ ಅಕ್ಕಪಕ್ಕದ ರಾಜ್ಯಗಳಿಗಿಂತ ಉತ್ತಮವಾಗಿ ನಿರ್ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಸಂಘಟನಾತ್ಮಕ ವಲಯದ ಕಾರ್ಮಿಕರು ಮತ್ತಿತರರಿಗೆ ಸರ್ಕಾರ ಪರಿಹಾರ ನೀಡಿದೆ, ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮಠದ ಮುಖ್ಯಸ್ಥರಿಗೆ ತಿಳಿಸುತ್ತೇವೆ. ಮತ್ತು ಜನರಿಗೆ ಸಹಾಯ ಮಾಡುವ ಕಲ್ಯಾಣ ಯೋಜನೆಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರ ಸಲಹೆ ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ