ಮಂಡ್ಯ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವರಾಗಿದ್ದ ಜಿ ಮಾದೇಗೌಡ ಅವರು ಶನಿವಾರ ಕೊನೆಯುಸಿರು ಎಳೆದಿದ್ದಾರೆ.
92 ವರ್ಷ ವಯಸ್ಸಿನ ಮಾದೇಗೌಡ ಅವರು ಕಳೆದ ಹಲವು ದಿನಗಳಿಂದ ಮದ್ದೂರಿನ ಕೆಎಂ ದೊಡ್ಡಿ ಜಿ ಮಾದೇಗೌ ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಹಲೋಕ ತ್ಯಜಿಸಿದ್ದಾರೆ.
ಮಾದೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರಗೊಂಡಿದ್ದ ಹಿನ್ನಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿರ್ಮಾಲಾನಂದ ಶ್ರೀ, ಡಿಸಿಎಂ ಅಶ್ವತ್ಥ್ ನಾರಾಯಣ, ಎಸ್ ಎಂ ಕೃಷ್ಣ, ಸಂಸದೆ ಸುಮಲತಾ ಸೇರಿದಂತೆ ಹಲವರು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದರು.
ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಜಿ ಮಾದೇಗೌಡ ಅವರು ರಾಜ್ಯದ ನೆಲ ಜಲ, ರೈತರ ದನಿಯಾದವರು. 1959ರಲ್ಲಿ ತಾಲೂಕು ಮಂಡಳಿ ಚುನಾವಣೆ ಮೂಲಕ ತಮ್ಮ ರಾಜಕೀಯ ಆರಂಭಿಸಿದ ಮಾದೇಗೌಡ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. ಬಳಿಕ 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980-83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 89 ವರ್ಷದ ಇಳಿ ವಯಸ್ಸಿನಲ್ಲೂ ಯೂ ಕಾವೇರಿ ನದಿ ನೀರಿನ ವಿಷಯವಾಗಿ ನಿರಂತರ ಹೋರಾಟ ಮಾಡಿ ಮಂಡ್ಯ ರೈತರ ಧ್ವನಿಯಾಗಿದ್ದರು. ಅಷ್ಟೇ ಅಲ್ಲದೇ, ಮಹಾದಾಯಿ ಹೋರಾಟಕ್ಕೂ ಬೆಂಬಲ ನೀಡಿದ್ದ ಅವರು, ರಾಜ್ಯದ ರೈತರ ಹಿತ ಕಾಯಲು ಸದಾ ಸಿದ್ದ ಎಂದಿದ್ದರು,
ನಿಮ್ಮ ಕಾಮೆಂಟ್ ಬರೆಯಿರಿ