ಶಿಲ್ಲಾಂಗ್, ಜುಲೈ 31: ಕುರಿ, ಕೋಳಿ, ಮೀನಿನ ಮಾಂಸಕ್ಕಿಂತ ಹೆಚ್ಚು ಗೋಮಾಂಸವನ್ನು ಸೇವಿಸುವಂತೆ ಮೇಘಾಲಯ ಸಚಿವ ಸಣ್ಬೂರ್ ಶುಲ್ಲೈ ಹೇಳಿಕೆ ನೀಡಿ ಹೊಸ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಪಶುಸಂಗೋಪನಾ ಸಚಿವರ ಬಾಯಲ್ಲೇ ಇಂತಹ ಮಾತು ಬಂದಿರುವುದಕ್ಕೆ ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಮಾಡಲು ಮುಂದಾಗಿದ್ದರೆ, ಇನ್ನೊಂದೆಡೆ ಬಿಜೆಪಿ ಸಚಿವರೇ ವಿವಾದ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸುವಂತೆ ಮೇಘಾಲಯ ಸಚಿವ ಸಣ್ಬೂರ್ ಶುಲ್ಲೈ ಹೇಳಿದ್ದಾರೆ.
ಮೇಘಾಲಯದ ಬಿಜೆಪಿ ಹಿರಿಯ ನಾಯಕ ಹಾಗೂ ಸ್ವತಃ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ಸಚಿವರಾಗಿರುವ ಸಣ್ಬೂರ್ ಶುಲ್ಲೈ ಅವರು, ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸುವಂತೆ ಕರೆ ನೀಡಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ, ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರು. ಜನರಿಗೆ ಗೋಮಾಂಸ ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುತ್ತದೆ ಎಂಬ ಜನರಲ್ಲಿರುವ ಆತಂಕವನ್ನು ದೂರ ಮಾಡಲು ಮುಂದಾಗಿದೆ ಎಂದು ಹೇಳಿದರು.
ಅಲ್ಲದೆ ನೆರೆಯ ರಾಜ್ಯ ಅಸ್ಸಾಂನಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಆ ಹೊಸ ಕಾನೂನಿಂದ ಮೇಘಾಲಯಕ್ಕೆ ಜಾನುವಾರ ಸಾಗಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಇದೇ ವೇಳೆ ಮೇಘಾಲಯ ಮತ್ತು ಅಸ್ಸಾಂ ನಡುವಿನ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಗಡಿ ಮತ್ತು ಜನರನ್ನು ರಕ್ಷಿಸಲು ರಾಜ್ಯವು ತನ್ನ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಸಮಯ ಬಂದಿದೆ. ಅಸ್ಸಾಂನ ಜನರು ಗಡಿ ಪ್ರದೇಶದಲ್ಲಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದರೆ, ನಾವು ಪ್ರತಿಕ್ರಿಯಿಸಬೇಕು, ಮತ್ತು ಸ್ಥಳದಲ್ಲೇ ತಿರುಗೇಟು ನೀಡಬೇಕು ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಬಿಜೆಪಿಯ ಹಿರಿಯ ನಾಯಕ ಶುಲ್ಲೈ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಅವರಿಗೆ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ನೀಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ