ನಾನು ಹಿಂದೆ ಇದ್ದ ಪಕ್ಷದವರೇ ದೂರು ನೀಡಿ ನನ್ನ ಮೇಲೆ ಇಡಿ ದಾಳಿ ಮಾಡಿಸಿದ್ದಾರೆ: ಜಮೀರ್ ಆರೋಪ

ಬೆಂಗಳೂರು: ನನ್ನ ರಾಜಕೀಯ ಏಳಿಗೆ ಸಹಿಸಲಾಗದೆ ನಾನು ಈ ಹಿಂದೆ ಇದ್ದ ಪಕ್ಷದವರೇ ನನ್ನ ವಿರುದ್ಧ ದೂರು ಕೊಟ್ಟು ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರತ್ತ ಪರೋಕ್ಷವಾಗಿ ಬೆರಳು ತೋರಿಸಿದ್ದಾರೆ. ನಾನು ಯಾರ ಹೆಸರನ್ನು ಹೇಳಲು ಬಯಸುವುದಿಲ್ಲ. ಆದರೆ ಕೆಲವರಿಗೆ ನನ್ನ ಏಳಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬಹುಶಃ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಅವರು ಅಂದುಕೊಂಡಿರಲಿಲ್ಲ. ಹಾಗಾಗಿ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಅವರನ್ನು ಬಿಟ್ಟು ಬೇರೆ ಯಾರು ಮನೆ ಕಟ್ಟಬಾರದು. ಹೀಗಾಗಿ ನಾನು ಮನೆ ಕಟ್ಟಿರುವುದು ಅವರಿಗೆ ಕಣ್ಣು ಉರಿ ತರಿಸಿದೆ. ಅವರನ್ನು ಬಿಟ್ಟು ಯಾರು ಬೆಳೆಯಬಾರದು ಎಂಬುದು ಅವರ ಉದ್ದೇಶ. ಅದಕ್ಕಾಗಿ ನಾನು ಮನೆ ಕಟ್ಟಿದ್ದನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಇಡಿ ದಾಳಿ ಮಾಡಿಸಿದರೆ ನಾನು ದುರ್ಬಲನಾಗುತ್ತೇನೆ ಎಂದು ಅವರು ಭಾವಿಸಿದ್ದಾರೆ. ನನ್ನ ರಾಜಕೀಯ ಭವಿಷ್ಯ ಮುಗಿಸಲು ಪ್ರಯತ್ನಿಸಿದ್ದಾರೆ. ಆದರೆ ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ತಪ್ಪು ಮಾಡದೇ ಇರುವುದರಿಂದ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನನ್ನ ಮನೆಯ ಮೇಲಿನ ದಾಳಿಗೂ ಐಎಂಎ ಹಗರಣಕ್ಕೂ ಸಂಬಂಧ ಇಲ್ಲ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು. ಅವರಿಗೂ ಐಎಂಎಗೂ ಯಾವುದೇ ಸಂಬಂಧ ಇರಲಿಲ್ಲ. ರಾಜಕೀಯವಾಗಿ ಬೆಳೆಯುತ್ತೇವೆ ಎಂಬ ಕಾರಣಕ್ಕೆ ಇಂಥ ದಾಳಿಗಳನ್ನು ನಡೆಸಲಾಗುತ್ತದೆ ಎಂದು ಆರೋಪಿಸಿದರು.
ದಾಳಿ ನಡೆಸಿದ ಅಧಿಕಾರಿಗಳಿಗೆ ಶೇ.90ರಷ್ಟು ಮಾಹಿತಿ ನೀಡಿದ್ದೇನೆ. ಇನ್ನೂ ಶೇ.10ರಷ್ಟು ಮಾಹಿತಿಯನ್ನು 10 ದಿನಗಳ ಒಳಗೆ ನೀಡುವಂತೆ ಇಡಿ ಅಧಿಕಾರಿಗಳು ಮೌಕಿಕವಾಗಿ ತಿಳಿಸಿದ್ದಾರೆ. ಖುದ್ದು ಅವರೇ ಬ್ಯಾಂಕ್‍ಗೆ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement