ಚಾಮರಾಜನಗರ:ಎರಡು ಹುಲಿಗಳ ಮಧ್ಯೆ ನೆಲೆಗಾಗಿ ಕಾದಾಟ (Territorial Fight) ನಡೆದು ಒಂದು ಗಂಡು ಹುಲಿ ಮೃತಪಟ್ಟ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ವಲಯ ವ್ಯಾಪ್ತಿಯ ಕಣಿಯನಪುರ ಗ್ರಾಮದ ಕಾಡಿನ ಬಳಿ ಈ ಘಟನೆ ನಡೆದಿದ್ದು, ಸುಮಾರು 5 ವರ್ಷದ ಗಂಡು ಹುಲಿ ಈ ಕಾಳಗದಲ್ಲಿ ಮೃತಪಟ್ಟಿದೆ. ಎರಡು ಗಂಡು ಹುಲಿಗಳು ಕಾಡಿನಲ್ಲಿ ತಮ್ಮ ವಾಸ ಸ್ಥಾನದ ವ್ಯಾಪ್ತಿ ಗುರುತಿಸಿ ಕೊಳ್ಳುವ ಸಲುವಾಗಿ ಕಾಳಗ ನಡೆಸಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 1 ಸಾವಿರದ 36 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಈಗಾಗಲೇ ಬಂಡಿಪುರದಲ್ಲಿ ಸುಮಾರು 145ಕ್ಕೂ ಹೆಚ್ಚು ಹುಲಿಗಳು ಇವೆ ಎಂದು ಅಂದಾಜು ಮಾಡಲಾಗಿದೆ.
ಜುಲೈ 29 ರಂದು ನಡೆದ ರಾಷ್ಟ್ರೀಯ ಹುಲಿ ದಿನಾಚರಣೆ ವೇಳೆ ಬಂಡೀಪುರದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ ಟಿಸಿ) ಸಂತಸ ವ್ಯಕ್ತಪಡಿಸಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನ ಗ್ರೀನ್ ವಲಯ ಎಂದು ಘೋಷಣೆ ಮಾಡಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೇರಳವಾಗಿ ಸಸ್ಯಾಹಾರಿ ಪ್ರಾಣಿಗಳು ಇರುವುದರಿಂದ ಹುಲಿ, ಚಿರತೆ, ಸೀಳುನಾಯಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪಕ್ಕದ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೇರಳ ವಯನಾಡು ಹುಲಿ ಸಂರಕ್ಷಿತ ಪ್ರದೇಶ ಸಮೀಪವೇ ಇರುವುದರಿಂದ ವನ್ಯ ಪ್ರಾಣಿಗಳಿಗೆ ವಾಸ ಮಾಡಲು ಯೋಗ್ಯವಾದ ಪ್ರಶಸ್ತ ಸ್ಥಳವಾಗಿದೆ.
ಸದ್ಯ ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ನಟೇಶ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯರು ಮೃತ ಹುಲಿಯ ಪೋಸ್ಟ್ ಮಾರ್ಟಂ ನಡೆಸಿದರು. ನಂತರ ಹುಲಿಯ ಅಂತ್ಯಕ್ರಿಯೆ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ