ನವಕರ್ನಾಟಕಕ್ಕೆ ದೃಢ ಸಂಕಲ್ಪ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು: ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಉಳಿದಿರುವ 20 ತಿಂಗಳಲ್ಲಿ ಅಭಿವೃದ್ಧಿ ಕೆಲಸಕ್ಕೆ ವೇಗ ನೀಡುತ್ತೇವೆ. ಇವತ್ತಿನಿಂದ ನವಕರ್ನಾಟಕ ಆಗುತ್ತದೆಂದು ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣದ ಬಳಿಕ ಮಾಡಿದ ತಮ್ಮ ಭಾಷಣದಲ್ಲಿ ಅವರು ಕರ್ನಾಟಕದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅಭಿವೃದ್ಧಿ ಮಂತ್ರ ಜಪಿಸಿದರು.
ಅಭಿವೃದ್ಧಿಮಂತ್ರದೊಂದಿಗೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರಿಯುವ ಸಂಕಲ್ಪ ಮಾಡಿದ್ದೇನೆ. ಸರ್ಕಾರ ಒಂದು ನಿರಂತರ ಪ್ರಕ್ರಿಯೆ. ಅದರಲ್ಲಿ ಪಾತ್ರಧಾರಿಗಳು ಬದಲಾದರೂ ಆಡಳಿತ ಯಂತ್ರ ನಿಲ್ಲಬಾರದು ಎಂದು ಹೇಳಿದರು.
ವಿಶ್ವಾಸಾರ್ಹ, ದಕ್ಷ, ಪ್ರಾಮಾಣಿಕ, ಪಾರದರ್ಶಕ, ಜನಸ್ನೇಹಿ ಆಡಳಿತ ನೀಡುವುದು ತಮ್ಮ ಸರ್ಕಾರದ ಆದ್ಯತೆ. ನಿಗದಿತ ಅವಧಿಯೊಳಗೆ ಯೋಜನೆ ಅನುಷ್ಠಾನ, ಜನಪರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಸರ್ಕಾರದ ಧ್ಯೇಯವಾಗಿದೆ. ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯದೇ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ಅನುಷ್ಠಾನಗೊಂಡು ಅವುಗಳ ಪ್ರತಿಫಲಗಳು ಜನತೆಗೆ ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ದೃಢಸಂಕಲ್ಪದ ಪರಿಣಾಮವಾಗಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಇವತ್ತಿಂದ ನವಕರ್ನಾಟಕ ಆಗಲಿದೆ ಎಂದು ನಾನು ಘೋಷಣೆ ಮಾಡುತ್ತೇನೆ. ಈಗ 20 ತಿಂಗಳು ಮಾತ್ರ ಅಧಿಕಾರ ಇದೆ. ಇಷ್ಟು ದಿನದಲ್ಲಿ ಏನು ಮಾಡಬಹುದು ಅದನ್ನು ಮಾಡುತ್ತೇವೆ ಎಂದು ದೃಢ ಸಂಕಲ್ಪ ಮಾಡದಿರು.
ಯಾವುದೇ ಸರ್ಕಾರಿ ಕಚೇರಿ ಸುತ್ತ ಜನರು ಸುತ್ತಬಾರದು. ಜನರು ಬಂದರೆ ಅವರ ಕೆಲಸ ಬೇಗ ಮಾಡಲು ಕ್ರಮ ವಹಿಸುತ್ತೇವೆ. ಜನರು ತಮ್ಮ ಕೆಲಸಗಳಿಗೆ ಅಲೆದಾಡುವುದನ್ನು ತಪ್ಪಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತನ ಶ್ರಮದಲ್ಲಿ, ಕೂಲಿಕಾರನ ಬೆವರಲ್ಲಿ ದೇವರಿದ್ದಾನೆ. ರಾಜ್ಯದ ಜನರನ್ನ ಮನಸ್ಸಲ್ಲಿಟ್ಟುಕೊಂಡು ಜನರ ಬಾಗಿಲಿಗೆ ಕಾರ್ಯಕ್ರಮಗಳನ್ನ ತೆಗೆದುಕೊಂಡು ಹೋಗುತ್ತೇನೆ. ಅವರ ಬದುಕನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುತ್ತೇನೆ. ನನ್ನ ಕನ್ನಡನಾಡಿನ ಪ್ರತಿಯೊಂದು ಕುಟುಂಬ, ಅವರ ಬದುಕು ಬೆಳವಣಿಗೆ ಆಗಬೇಕು. ಶಿಕ್ಷಣ ಆರೋಗ್ಯ ನೆಮ್ಮದಿ ಪ್ರತಿಯೊಂದು ಸಿಗಬೇಕು ಅನ್ನೋದನ್ನ ಮನಸ್ಸಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement