ಹುಬ್ಬಳ್ಳಿ: ಬಿಜೆಪಿಯ ಜನಾಶ್ರೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.
ಇಲ್ಲಿನ ಕ್ಯೂಬಿಕ್ಸ್ ಹೊಟೇಲ್ಲಿನ ಐವರು ಕೋವಿಡ್ ವಾರಿಯರ್ಸಿಗೆ ಸನ್ಮಾನಿಸುವ ಮೂಲಕ ಜನಾಶೀರ್ವಾದ ಯಾತ್ರೆ ಉದ್ಘಾಟಿಸಿದ ರಾಜೀವ ಚಂದ್ರಶೇಖರ, ಭಾರತ ಬೆಳವಣಿಗೆ ಹೊಂದಲು ಸರಿಯಾದ ಸಮಯ ಬಂದಿದೆ. ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ ಎಂದರು.
ಮುಂದಿನ 25 ವರ್ಷಗಳಲ್ಲಿ ಯುವ ಪೀಳಿಗೆಯನ್ನು ಅಭಿವೃದ್ಧಿ ಯೋಜನೆಗಳಲ್ಲಿ ಬಳಸಿಕೊಳ್ಳುವ ಉದ್ದೇಶ ಮೋದಿ ಸರ್ಕಾರದ್ದು.
ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ 60 ವರ್ಷ ಕೇವಲ ಕುಟುಂಬ ರಾಜಕಾರಣ ಮಾಡಿದೆ. ನಿರೀಕ್ಷಿತ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದರೆ ಬಿಜೆಪಿ ಸಾಮಾಜಿಕ ನೆಲೆಗಟ್ಟಿನಲ್ಲಿ ಎಲ್ಲರಿಗೂ ಸಮನಾಗಿ ನೋಡುತ್ತದೆ, ಸಮನಾಗಿ ಅವಕಾಶ ನೀಡುತ್ತದೆ. ಹೀಗಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಮಾತನಾಡಿ, ಚುನಾವಣೆ ಬಂದಾಗ ಜನಾರ್ಶಿರ್ವಾದ ಮಾಡುವುದು, ಜೈಲಿನಿಂದ ಹೋಗುವಾಗ ಜೈಲಿನಿಂದ ಬರುವಾಗ ಯಾತ್ರೆ ಮಾಡುವ ಸರ್ಕಾರ ನಮ್ಮದಲ್ಲ. ಜನಸಾಮಾನ್ಯರ ಹತ್ತಿರ ಅವರ ಕಷ್ಟ ತಿಳಿದುಕೊಂಡು ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ಅರ್ಥಮಾಡಿಸಲು ಈಗ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಜನಸಂಘದಿ0ದಲೂ ಬಿಜೆಪಿಗೆ ಹುಬ್ಬಳಿ-ಧಾರವಾಡ ಶಕ್ತಿಕೇಂದ್ರವಾಗಿದೆ. 1967ರಲ್ಲಿಯೇ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಿಂದ ನಾಲ್ವರು ಜನಸಂಘದ ಶಾಸಕರು ಶಾಸಕರು ಆಯ್ಕೆಯಾಗಿದ್ದರು. 1976 ರಲ್ಲಿ ಜನಸಂಘದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿದ್ದರು. ಇದೀಗ ಮೂರನೇ ಬಾರಿಗೆ ಪಾಲಿಕೆ ಚುನಾವಣೆ ಯಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರ ಜನರ ಸರ್ಕಾರವಾಗಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ ಜನರೊಂದಿಗೆ ಬೆರತು ಜನರ ಸಮಸ್ಯೆ ಅರಿತುಕೊಂಡು ಅವರಿಗೆ ಹತ್ತಿರವಾಗುವಂತಹ ಕಾರ್ಯವನ್ನು ಪ್ರಧಾನಿ ಮೋದಿಯ ಆಡಳಿತ ಮಾಡುತ್ತಿದೆ. ಕೋವಿಡ್ ಎಂಬ ಬಿಕ್ಕಟ್ಟಿನಲ್ಲಿ ಭಾರತ ದೇಶ ಇಡೀ ಜಗತ್ತಿಗೆ ಮಾದರಿಯಾಗಿ ಕೆಲಸ ಮಾಡಿದೆ ಎಂದರು.
ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಮುಖಂಡರಾದ ಕೇಶವ ಪ್ರಸಾದ, ಜಯಾ ರುದ್ರೇಶ ,ಲಿಂಗರಾಜ ಪಾಟೀಲ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರಿಗೆ ಬಸವೇಶ್ವರರ ಪುತ್ಥಳಿ ನೀಡಿ ಸನ್ಮಾನಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ