ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್‌ ಆದ್ಮಿ ಪಾರ್ಟಿ

ಹುಬ್ಬಳ್ಳಿ: ದೇಶದಲ್ಲಿ ಆಪ್ ಆದ್ಮಿ ಪಾರ್ಟಿ ವೇಗವಾಗಿ ಬೆಳೆಯುತ್ತಿರುವ ಪಕ್ಷ, ಹೀಗಾಗಿಯೇ ಕೇಂದ್ರದ ಸಚಿವರಾದ ಪ್ರಲ್ಹಾದ್ ಜೋಶಿ ಭಯಗೊಂಡು ಆಮ್‌ ಆದ್ಮಿ ಪಾರ್ಟಿ ಕುರಿತು ಹಾರಿಕೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗೆ ಪಕ್ಷದಿಂದ ಮಹಾನಗರ ಚುನಾವಣೆ ಮೂಲಕ ಉತ್ತರ ನೀಡಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆ ಆಮ್ ಆದ್ಮಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ ಪಕ್ಷ ಕೇವಲ ಸಾಮಾಜಿಕ ಜಾಲತಾಣದಲ್ಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದ ಬಗ್ಗೆ ಮಾತನಾಡುವ ಬಿಜೆಪಿಯವರು ಈ ಹಿಂದೆ ಜನರಿಗೆ ಹೇಳಿದ ಭರವಸೆ ಈಡೇರಿಸಿದ್ದಾರೆಯೇ ಎಂಬುದನ್ನು ತಾವು ಅರಿತುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಬಂದರೆ ಜನರ ಅಭಿವೃದ್ಧಿ ಸಾಧ್ಯ ಎಂದು ಬಿಂಬಿಸಿ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಗೆ ಆಪ್ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಬಿಜೆಪಿ ಪಕ್ಷಕ್ಕೆ ಜನರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೊದಲು ಪ್ರಣಾಳಿಕೆಯ ಆಶ್ವಾಸನೆ ಕೊಡದೆ ಬಾಂಡ್ ನಲ್ಲಿ ಅವರ ಜನತೆಗೆ ನೀಡುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬರೆದುಕೊಟ್ಟು ನಂತರ ಚುನಾವಣೆ ಎದುರಿಸಬೇಕು ಎಂದು ಹೇಳಿದರು.
ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಆದ್ಮಿ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ವಾರ್ಡ್ ನಂಬರ್ 3 ರಿಂದ ಮೆಹಬೂಬ್ ಇಬ್ರಾಹಿಂ ಹದ್ಲಿ, ವಾರ್ಡ್ 8 ರಿಂದ ಶರೀಫ್ ಸಾಬ ಮಡಿಕೇಶ್ವರ, ವಾರ್ಡ್ ನಂಬರ್ 10 ರಿಂದ ಹಸೀನಾಬಾನು ನಿಸ್ಸಾರ ಅಹ್ಮದ್ ಮಮದಾಪುರ, ವಾರ್ಡ್ ನಂಬರ್ 29 ರಿಂದ ಶ್ರೀರಂಗ ಮುತಾಲಿಕ್ ದೇಸಾಯಿ, ವಾರ್ಡ್ ನಂಬರ್ 33 ರಿಂದ ಶಿವಯೋಗಿ ಹೂಲಿ, ವಾರ್ಡ್ ನಂಬರ್ 53 ರಿಂದ ಮೋಹನ ಮದನಗೌಡ ಪಾಟೀಲ್, ವಾರ್ಡ್ ನಂಬರ್ 55 ರಿಂದ ನಾರಾಯಣ್ ಎಲ್ಲಪ್ಪ ಮೊರಬ್, ವಾರ್ಡ್ ನಂಬರ್ 61 ರಿಂದ ವಿಕ್ಕಿ ಬಸವರಾಜ ಅರಳಿಕಟ್ಟಿ, ವಾರ್ಡ್ ನಂಬರ್ 70 ರಿಂದ ಲತಾ ವೈಶಾಖವರ್ಮನ್ ಕೊಯಿಲೋ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನುಳಿದ ವಾರ್ಡ್ ಗಳ ಅಭ್ಯರ್ಥಿಗಳ ಹೆಸರನ್ನು ಎರಡು ಪಟ್ಟಿಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಆಮ್‌ ಆದ್ಮಿ ಪಾರ್ಟಿ ಪಕ್ಷದ ಮುಖಂಡ ಹೆಚ್.ಡಿ.ಬಸವರಾಜು, ರಾಜ್ಯ ಸಹ ಸಂಚಾಲಕ ಹಾಗೂ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಶಾಂತಲಾ ದಾಮ್ಲೆ, ನಿವೃತ್ತ ಕೆಎಎಸ್ ಅಧಿಕಾರಿ ರವಿ ಶಂಕರ ಸೇರಿದಂತೆ ಪಕ್ಷದ ಅಭ್ಯರ್ಥಿಗಳು ಇದ್ದರು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement