ಚಂಡೀಗಡ: ತಮ್ಮ ಸಲಹೆಗಾರರ ಬಗ್ಗೆ ಪಕ್ಷದ ಹೈಕಮಾಂಡ್ ಕಟು ನಿಲುವು ತಾಳಿರುವುದನ್ನು ಆಕ್ಷೇಪಿಸಿರುವ ಕಾಂಗ್ರೆಸ್ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮಗೆ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡದಿದ್ದರೆ ಪಕ್ಷದ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಹೇಳಿದ್ದಾರೆ.
ನನಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ವಿನಂತಿ ಮಾಡುತ್ತೇನೆ. ನನಗೆ ಸ್ವಾತಂತ್ರ್ಯ ನೀಡಿದರೆ ಪಕ್ಷವು ಮುಂದಿನ 20 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯುತ್ತದೆ. ಇಲ್ಲದಿದ್ದರೆ ಧ್ವಂಸವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿಧು ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಪಂಜಾಬ್ ರಾಜ್ಯ ಉಸ್ತುವಾರಿ ಹರೀಶ್ ರಾವತ್, ‘ಸಿಧು ಈಗ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಪಕ್ಷದ ಬಗ್ಗೆ ಅವರಲ್ಲದೆ ಮತ್ತಿನ್ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಹೇಳಿಕೆ ಆಧರಿಸಿ ನಾನು ಪ್ರತಿಕ್ರಿಯಿಸಲು ಆಗುವುದಿಲ್ಲ. ಅವರು ಈ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ನೀಡಿದ್ದಾರೆ ಎನ್ನುವುದನ್ನು ಗಮನಿಸಿದ ನಂತರವಷ್ಟೇ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಮುಂದಿನ ಶನಿವಾರ ಭೇಟಿಯಾಗುತ್ತೇನೆ. ಸಿಧು ಸಲಹೆಗಾರರ ಹೇಳಿಕೆಗಳ ವಿವಾದ ಈಗ ಅಪ್ರಸ್ತುತ. ಏಕೆಂದರೆ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದಾರೆ ಎಂದು ರಾವತ್ ಹೇಳಿದರು.
ಸಿಧು ಅವರು ಸಲಹೆಗಾರ ಮಲ್ವಿಂದರ್ ಸಿಂಗ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್ ವಿವಾದಕ್ಕೀಡಾಗಿತ್ತು. ಕಾಶ್ಮೀರ ಭಾರತದ ಭಾಗವಾಗಿತ್ತು. ಅಲ್ಲಿಗೆ 370 ಮತ್ತು 35ಎ ಪರಿಚ್ಛೇದಗಳನ್ನು ಜಾರಿಗೊಳಿಸುವ ಅಗತ್ಯವೇನಿತ್ತು. ಕಾಶ್ಮೀರದ ನಿವಾಸಿಗಳಿಗೆ ಅದು ಅವರ ದೇಶ ಎಂದು ತಿಳಿಸಿದರು. ಸಿಧು ಅವರ ಮತ್ತೋರ್ವ ಸಲಹೆಗಾರ ಪ್ಯಾರೆಲಾಲ್ ಗರ್ಗ್ ಪಾಕಿಸ್ತಾನದ ಬಗ್ಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದರು.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ನಿಷ್ಠರಾಗಿರುವ ಕೆಲ ಶಾಸಕರು ಸಿಧು ಹೇಳಿಕೆಗಳ ವಿರುದ್ಧ ಹರಿಹಾಯ್ದಿದ್ದರು. ಪಾಕಿಸ್ತಾನ ಮತ್ತು ಕಾಶ್ಮೀರದ ಬಗ್ಗೆ ತಮ್ಮ ಹೇಳಿಕೆಗಳು ತೀವ್ರ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಿಧು ಅವರ ಸಲಹೆಗಾರ ಮಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀರ್ಧಾರವನ್ನು ಫೇಸ್ಬುಕ್ನಲ್ಲಿಯೇ ಘೋಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ