ಟೋಕಿಯೊ ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್ ನಲ್ಲಿ ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸಗೆ ಬೆಳ್ಳಿ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪುರುಷರ ಬ್ಯಾಡ್ಮಿಂಟನ್‌ (ಎಸ್‌ಎಲ್‌-4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಎದುರು ಭಾರತದ ಸುಹಾಸ್ ಯತಿರಾಜ್ ಸೋಲು ಅನುಭವಿಸಿದರು. ಆದರೆ ಈ ಬೆಳ್ಳಿ ಪದಕ ಪಡೆದಿದ್ದಾರೆ.
ಪ್ರಸ್ತುತ ನೋಯ್ಡಾದ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್‌) ಕನ್ನಡಿಗ ಸುಹಾಸ್ ಯತಿರಾಜ್, ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಐಎಎಸ್‌ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾದರು. ಇದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 18ನೇ ಪದಕವಾಗಿದೆ.
ಫ್ರಾನ್ಸ್‌ನ ಮಜೂರ್‌ ಎದುರು ಸುಹಾಸ್‌ 21-15, 17-21, 15-21 ಅಂತರದಲ್ಲಿ ಸೋಲು ಕಂಡರು. ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಇಂಡೋನೇಷ್ಯಾದ ಸತ್ಯವಾನ್‌ ಫ್ರೆಡಿ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಎಸ್‌ಎಲ್‌-4 ವಿಭಾಗದಲ್ಲಿ ಸುಹಾಸ್ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಸುಹಾಸ್‌ ಫೈನಲ್‌ ಸೇರಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದಾರೆ.
ಹಾಸನದಲ್ಲಿ ಜನಿಸಿ ಶಿವಮೊಗ್ಗದಲ್ಲಿ ಬೆಳೆದ ಸುಹಾಸ್ ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿರುವ ಎನ್‌ಐಟಿಯಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್ ಮಾಡಿದ್ದಾರೆ. ಈಗ ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿ. ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಅವರು ಆರು ಜಿಲ್ಲೆಗಳ ಡಿಎಂ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್‌) ಆಗಿ ಸೇವೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement