ದೇವಸ್ಥಾನದ ಆಸ್ತಿ ದೇವರಿಗೆ ಸೇರಿದ್ದು, ಭೂ ದಾಖಲೆಯಲ್ಲಿ ಅರ್ಚಕರ ಹೆಸರು ನಮೂದಿಸುವ ಅಗತ್ಯವಿಲ್ಲ:ಸುಪ್ರೀಂಕೋರ್ಟ್

ನವದೆಹಲಿ: ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕತ್ವದ ವಿಚಾರಕ್ಕೆ ಬಂದಾಗ ಭೂ ದಾಖಲೆಗಳಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವರ ಹೆಸರು ಮಾತ್ರ ಉಲ್ಲೇಖಕ್ಕೆ ಅರ್ಹ, ಅರ್ಚಕರು ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ. ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
ನ್ಯಾಯಿಕ ವ್ಯಕ್ತಿಯಾಗಿ (ಜ್ಯೂರಿಸ್ಟಿಕ್‌ ಪರ್ಸನ್‌) ದೇವರೇ ಭೂಮಿಯ ಮಾಲೀಕನಾಗಿರುವಾಗ ಭೂ ದಾಖಲೆಗಳಲ್ಲಿ ಪೂಜಾರಿ ಅಥವಾ ವ್ಯವಸ್ಥಾಪಕರ ಹೆಸರನ್ನು ಉಲ್ಲೇಖಿಸಲೇಬೇಕು ಎಂಬ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಮತ್ತು ಎ. ಎಸ್‌. ಬೋಪಣ್ಣ ಅವರಿದ್ದ ವಿಭಾಗೀಯ ಪೀಠ ಹೇಳಿದೆ ಎಂದು ಎಂದು ಬಾರ್‌ ಎಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ನ್ಯಾಯಿಕ ವ್ಯಕ್ತಿಯಾಗಿ ದೇವರೇ ಭೂಮಿಯ ಮಾಲೀಕನಾಗಿರುವುದರಿಂದ ಭೂ ದಾಖಲೆಗಳಲ್ಲಿ ಮಾಲೀಕರ ಕಲಂನಲ್ಲಿ ದೇವರ ಹೆಸರನ್ನು ಮಾತ್ರ ಉಲ್ಲೇಖಿಸಿದರೆ ಸಾಕು. ದೇವರೇ ಭೂಮಿಯ ಸ್ವಾಮ್ಯ ಹೊಂದಿರುವುದರಿಂದ ದೇವರ ಸೇವಕರು ಅಥವಾ ವ್ಯವಸ್ಥಾಪಕರು ದೇವರ ಪರವಾಗಿ ಅದನ್ನು ಅನುಭೋಗಿಸುತ್ತಾರೆ. ಹೀಗಾಗಿ, ಅನುಭೋಗಿಸುವ ಪಟ್ಟಿಯಲ್ಲಿ ವ್ಯವಸ್ಥಾಪಕರು ಅಥವಾ ಪೂಜಾರಿಯ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
ಮಧ್ಯಪ್ರದೇಶ ಕಂದಾಯ ಕಾನೂನು ಸಂಹಿತೆ 1959ರ ಅಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ವಜಾಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು.
ಕಾನೂನುಬಾಹಿರವಾಗಿ ಪೂಜಾರಿಗಳು ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಭೂ ದಾಖಲೆಯಲ್ಲಿ ಪೂಜಾರಿಗಳ ಹೆಸರನ್ನು ತೆಗೆದು ಹಾಕುವ ಸಂಬಂಧ ಸರ್ಕಾರವು ಕಾರ್ಯಕಾರಿ ಸೂಚನೆಗಳನ್ನು ಒಳಗೊಂಡ ಸುತ್ತೋಲೆ ಹೊರಡಿಸಿತ್ತು.
ಪ್ರಕರಣದ ನ್ಯಾಯ ನಿರ್ಣಯದ ವೇಳೆ ಪೀಠವು ಈಚೆಗೆ ಭಾರಿ ಸಂಚಲನ ಮೂಡಿಸಿದ್ದ ಅಯೋಧ್ಯಾ ಪ್ರಕರಣ ಎಂದೇ ಖ್ಯಾತಿ ಪಡೆದಿದ್ದ ಎಂ ಸಿದ್ಧಿಕ್‌ (ನಿಧನಾನಂತರ) ಅವರ ಕಾನೂನು ಪ್ರತಿನಿಧಿಗಳು ವರ್ಸಸ್‌ ಮಹಾಂತ್‌ ಸುರೇಶ್‌ ದಾಸ್‌ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಹಾಗೂ ಪಂಚಮ್‌ ಸಿಂಗ್‌ ವರ್ಸಸ್‌ ರಾಮಕೃಷ್ಣದಾಸ್‌ ಗುರು ದಾಸ್‌ ಮತ್ತು ಇತರರು ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement