ಸೆ.13ರಿಂದ 24ರ ವರೆಗೆ ವಿಧಾನಸಭಾ ಅಧಿವೇಶನ, ಕೊನೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಈ ಅಧಿವೇಶನದ ವಿಶೇಷ: ಸ್ಪೀಕರ್ ಕಾಗೇರಿ

ಬೆಂಗಳೂರು : ಈ ಸಲದ ವಿಧಾನಸಭಾ ಅಧಿವೇಶನ ಸೆ. 13ರಿಂದ 24ರ ವರೆಗೆ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದು, ಈ ಬಾರಿ ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎಂದು ಹೇಳಿದ್ದಾರೆ.
ಈ ಕುರಿತು ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸೆ.13ರಿಂದ 24ರ ವರೆಗೆ ಅಂದರೆ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಮನವಿ ಮಾಡಿದರು.
ಪ್ರಶ್ನೆ ಕೇಳುವವರು ಇಲ್ಲ, ಉತ್ತರ ಹೇಳುವವರು ಇಲ್ಲ ಎಂಬುದಕ್ಕೆ ಈ ಬಾರಿ ಆಸ್ಪದ ನೀಡಬಾರದು. ಅಧಿವೇಶನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ದು, ಯಾರೂ ಗೈರಾಗಬಾರದು. ಮಂತ್ರಿಗಳು ಯಾವುದೋ ನೆಪವೊಡ್ಡಿ ರಜೆ ಕೇಳಬೇಡಿ. ಅಗತ್ಯವಿದ್ದಲ್ಲಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸೆ.24ರ ಅಧಿವೇಶನದ ಕೊನೆಯ ದಿನ ಕೇಂದ್ರದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಂದು ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ಮಾರ್ಗಸೂಚಿಗಳ ಪ್ರಕಾರವೇ ಅಧಿವೇಶನ ನಡೆಯಲಿದೆ. ಕಲಾಪ ವೀಕ್ಷಿಸಲು ಸಾರ್ವಜನಿಕರಿಗೆ ಅನುಮತಿ ಕೊಡಲಾಗುವುದು ಎಂದು ತಿಳಿಸಿದರು.
ಈ ಬಾರಿ 18 ಬಿಲ್​ಗಳು ಬಂದಿದ್ದು, ತಡೆ ಹಿಡಿದಿರುವ ನಾಲ್ಕು ಬಿಲ್​ಗಳು ಬಾಕಿ ಇವೆ. ಇವುಗಳ ಬಗ್ಗೆ ಚರ್ಚೆ ಮಾಡಲಾಗುವುದು. ಈ ಬಾರಿ ಅಧಿವೇಶನದಲ್ಲಿ ಕೆಲ ಬದಲಾವಣೆಗಳು ಇರಲಿವೆ. ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ. ಈ ಪ್ರಶಸ್ತಿಗೆ ಒಬ್ಬ ಶಾಸಕರನ್ನ ಗುರುತಿಸಲು ಕಮಿಟಿ ರಚನೆ ಮಾಡಿದ್ದೇವೆ. ಮುಖ್ಯಮಂತ್ರಿ ಹಾಗೂ ವಿಪಕ್ಷದವರು ಎಲ್ಲರೂ ಈ ಕಮಿಟಿಯಲ್ಲಿ ಇರಲಿದ್ದಾರೆ. ಈ ಬಾರಿ ಅಧಿವೇಶನವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು. ಆದರೆ, ಶಾಲಾ ಮಕ್ಕಳನ್ನು ಅಧಿವೇಶನಕ್ಕೆ ಕರೆದುಕೊಂಡು ಬರುವುದು ಬೇಡ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement