ಬೆಳಗಾವಿ : ರೈತರು ಮುಖ್ಯ ಬೆಳೆಯ ಜತೆಗೆ ಇತರ ಉಪ ಬೆಳೆಗಳನ್ನು ಬೆಳೆಯಬೇಕು; ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತಿತರ ಉಪ ಕಸುಬು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರೈತರಿಗೆ ಕರೆ ನೀಡಿದರು.
ರೈತರೊಂದಿಗೊಂದು ದಿನ” ಕಾರ್ಯಕ್ರಮದ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ನರಸಿಂಹ ಯಶವಂತ ಚೌಗಲೆ ಜಮೀನಿನಲ್ಲಿ ಮಂಗಳವಾರ (ಸೆ.28) ಕಬ್ಬಿನ ಬೆಳೆಯ ವಿವಿಧ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರಕಾರ ಸಬ್ಸಿಡಿ ಒದಗಿಸಿ ರೈತರ ಕೈಬಲಪಡಿಸುತ್ತಿವೆ. ಆದ್ದರಿಂದ ಕೃಷಿ, ಉಪಕಸುಬುಗಳ ಜೊತೆಗೆ ಮಾರುಕಟ್ಟೆಗೆ ತಕ್ಕಂತೆ ಆಹಾರ ಸಂಸ್ಕರಣೆಯ ಪದ್ಧತಿ ರೈತರು ರೂಢಿಸಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ ಎಂದರು.
ಕುರಿ ಸಾಕಾಣಿಕೆ ಕೂಡ ಲಾಭದಾಯಕವಾಗಿದೆ. ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಇಂತಹ ಪರ್ಯಾಯ ಸಾಧ್ಯತೆಗಳು ಮತ್ತು ಉಪಕಸುಬುಗಳ ಕುರಿತು ರೈತರು ಗಮನಹರಿಸಬೇಕು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5.48 ಲಕ್ಷ ರೈತರಿಗೆ 2019 ರಿಂದ ಇಲ್ಲಿ ವರೆಗೆ 1090 ಕೋಟಿ ರೂಪಾಯಿ ಲಭಿಸಿದೆ.
ಇತ್ತೀಚಿಗೆ ಸಂಭವಿಸಿದ ಬೆಳೆಹಾನಿಗೆ ಪರಿಹಾರ ಸಹ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 30 ಕೋಟಿ ರೂಪಾಯಿ ಬೆಳಗಾವಿ ಜಿಲ್ಲೆಗೆ ಲಭಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಅವರು, ಕೃಷಿ ಪದವಿ ಕಾಲೇಜುಗಳಲ್ಲಿ ರೈತರ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ರೈತರ ನೆರವಿಗೆ ಮುಂದಾಗಿದ್ದಾರೆ. ಒಟ್ಟಾರೆ ರೈತ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಅವರು ಹೇಳಿದರು.
ರೈತರು ಸರ್ಕಾರವನ್ನು ಹುಡುಕಿಕೊಂಡು ಹೋದರೂ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸರಕಾರವನ್ನೇ ರೈತರ ಮನೆಬಾಗಿಲಿಗೆ ಕರೆತರಲಾಗುತ್ತಿದೆ. ಮಂಡ್ಯದಿಂದ ಈ ಕಾರ್ಯಕ್ರಮ ಆರಂಭಗೊಂಡು ಇದೀಗ ಹನ್ನೆರಡು ಜಿಲ್ಲೆಯಲ್ಲಿ ನಡೆದಿದೆ ಎಂದು ಸಚಿವ ಪಾಟೀಲ ವಿವರಿಸಿದರು.
ಮೆರವಣಿಗೆಯಲ್ಲಿ ಕರೆದೊಯ್ದರು..
ಹಸಿರುಶಾಲು ಹೊದ್ದು ಎತ್ತಿನ ಬಂಡಿ ಏರಿಬಂದ ಕೃಷಿ ಸಚಿವ ಬಿ.ಸಿ.ಪಾಟೀಲ ಕಬ್ಬು ನಾಟಿ ಮಾಡಿದರು. ಭೀವಶಿ ಗ್ರಾಮದ ಶ್ರೀ ಥಳೋಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎತ್ತಿನ ಬಂಡಿ ಏರಿದ ಸಚಿವರನ್ನು ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು.
ಸಚಿವರಾದ ಶಶಿಕಲಾ ಜೊಲ್ಲೆ , ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಬಿ.ಸಿ.ಪಾಟೀಲ ಅವರ ಜತೆ ಎತ್ತಿನಬಂಡಿ ಏರಿ ಸಾಥ್ ನೀಡಿದರು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದರು. ಗ್ರಾಮದಲ್ಲಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ತೋರಣ ಕಟ್ಟಲಾಗಿತ್ತು.
ಕೃಷಿ ಕಾಲೇಜು ಮಂಜೂರಾತಿಗೆ ಒತ್ತಾಯ:
ಇದಕ್ಕೂ ಮುಂಚೆ ಮಾತನಾಡಿದ ನಿಪ್ಪಾಣಿಯ ಭೀವಶಿ ಗ್ರಾಮದವರೇ ಸಚಿವೆ ಶಶಿಕಲಾ ಜೊಲ್ಲೆ, ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳ ಪರಿಹರಿಸುವ ನಿಟ್ಟಿನಲ್ಲಿ ರೈತರೊಂದಿಗೆ ಒಂದು ದಿನ” ಕಳೆಯುವುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮ. ಸ್ವತಃ ಕೃಷಿ ಸಚಿವರೇ ರೈತರ ಮನೆಯಂಗಳಕೆ ಬಂದು ಅವರೊಂದಿಗೆ ಮುಕ್ತವಾಗಿ ಸಂವಾದ ನಡೆಸುವ ಮೂಲಕ ಕೃಷಿಕರ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ.
ನಿಪ್ಪಾಣಿ ಕ್ಷೇತ್ರ ಐದಾರು ವರ್ಷಗಳಿಂದ ಪ್ರವಾಹಕ್ಕೆ ತುತ್ತಾದ ಪರಿಣಾಮ ರೈತರು ಕಷ್ಟದಲ್ಲಿದ್ದಾರೆ. ಗಡಿಭಾಗ ಆಗಿರುವುದರಿಂದ ಇಲ್ಲಿನ ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ.ಗಡಿಭಾಗವಾಗಿರುವ ನಿಪ್ಪಾಣಿ ಭಾಗದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದರು.
ದೇಶದಲ್ಲಿ ಮೊದಲ ಬಾರಿಗೆ ಕೃಷಿ ಸಚಿವರೇ ರೈತರ ಜತೆ ಕಳೆಯುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ರೈತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟರಾಮರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ರೈತರ ಜತೆ ಸಂವಾದದಲ್ಲಿ ಕೇಳಿಬರುವ ಸಲಹೆ-ಸೂಚನೆಗಳು ಸರ್ಕಾರದಲ್ಲಿ ನೀತಿ-ನಿರೂಪಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಬ್ಬಿನ ನಾಟಿ ಪದ್ಧತಿಗಳ ಕುರಿತ ಕರಪತ್ರಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಬಿಡುಗಡೆಗೊಳಿಸಿದರು.
ಸೋಯಾಬಿನ್ ಗೆ ಸೂಕ್ತ ದರ ನಿಗದಿ; ಮಾರುಕಟ್ಟೆ ವ್ಯವಸ್ಥೆಗೆ ರೈತರ ಒತ್ತಾಯ..
ಸಂವಾದ ನಡೆಸಿದ ಸಂದರ್ಭದಲ್ಲಿ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ರೈತರು, ಬೆಳೆದ ಸಾವಯವ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ರೀತಿಯ ಬೇಡಿಕೆಗಳನ್ನು ಮುಂದಿಟ್ಟರು ಹಾಗೂ ಸೋಯಾಬಿನ್ ಬೆಳೆಗೆ ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿದರು.
ಚಿಕ್ಕೋಡಿ-ನಿಪ್ಪಾಣಿಯಲ್ಲಿ ವೇದಗಂಗಾ, ದೂಧಗಂಗಾ ಹಾಗೂ ಕೃಷ್ಣಾ ನದಿಗಳಿವೆ. ಇತ್ತೀಚೆಗೆ ಅತಿವೃಷ್ಟಿಯಿಂದ ಸೊಯಾಬಿನ್ ಬೆಳೆಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಬೆಳೆ ಬೆಳೆಯುವ ಪೂರ್ವದಲ್ಲಿಯೇ ಹಿಂದಿನ ಬೆಳೆಹಾನಿ ಪರಿಹಾರ ನೀಡಬೇಕು .
ನದಿತೀರದ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿವಾರಿಸುವ ಮೂಲಕ ರೈತರಿಗೆ ನೆರವಾಗಬೇಕು.
ಸಾವಯವ ಕೃಷಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಕೃಷಿ ಇಲಾಖೆ ನಿರ್ದೇಶಕರಾದ ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ಜಲಾನಯನ ವಿಭಾಗದ ನಿರ್ದೇಶಕರಾದ ನಂದಿನಿ ಕುಮಾರಿ, ಅಪರ ನಿರ್ದೇಶಕರಾದ ಡಾ.ವಿ.ಜೆ.ಪಾಟೀಲ, ಜಾಗೃತ ಕೋಶದ ಜಂಟಿ ನಿರ್ದೇಶಕರು ಜಿಲಾನಿ ಮೊಖಾಶಿ, ಬೆಳಗಾವಿ ಜಂಟಿ ನಿರ್ದೇಶಕರು ಶಿವನಗೌಡ ಪಾಟೀಲ, ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೆಕರ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ