ಚಂಡೀಗಡ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ( Navjot Singh Sidhu) ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸಭೆ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ಹಾಕಿದ್ದ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ. ಬೇಡಿಕೆ ಈಡೇರಿಸುವ ಕುರಿತು ಮೌಖಿಕ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಚನ್ನಿ, ಅಕ್ಟೋಬರ್ 4 ರಂದು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಚನ್ನಿ ಅಕ್ಟೋಬರ್ 4ರಂದು ಸಂಪುಟ ಸಭೆ ಕರೆದಿದ್ದಾರೆ.
ರಾಜೀನಾಮೆ ಹಿಂಪಡೆಯಲು ಸಿಧು ಒಪ್ಪಿಗೆ
ಇಂದು ನಡೆ¸ದ ಸಭೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯಲು ನವಜೋತ್ ಸಿಂಗ್ ಸಿಧು ಸಮ್ಮತಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗುರ್ದಿಪ್ ಅವರು, ಸಿಧು ಅವರು ತಮ್ಮ ರಾಜೀನಾಮೆ ಹಿಂಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸಿಧು ಮಂಗಳವಾರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಚನ್ನಿ ಸಿಧು ಅವರನ್ನ ಆಹ್ವಾನಿಸಿ ಸಮಸ್ಯೆ ಪರಸ್ಪರ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೇಳಿದ್ದರು. ಮುಖ್ಯಮಂತ್ರಿ ಈ ಸಂಬಂಧ ದೂರವಾಣಿಯಲ್ಲಿ ಮಾತನ್ನೂ ಆಡಿದ್ದರು. ಸಂದೇಶ ತಲುಪಿದ ಕೂಡಲೇ ತೆರಳದ ಸಿಧು, ಇಂದು ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ಭೇಟಿಯಾದರು.
ಆತ ಪಂಜಾಬ್ಗೆ ಸೂಕ್ತ ವ್ಯಕ್ತಿ ಅಲ್ಲ
ಪಂಜಾಬಿನಲ್ಲಿ ನಡೆದ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ನಿಂದ ಕಾಲು ಹೊರಗಿಟ್ಟಿರುವ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ರಾಜ್ಯಕ್ಕೆ ಸಿಧು ಸೂಕ್ತ ವ್ಯಕ್ತಿ ಅಲ್ಲ. ಅವರು ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಗೆಲ್ಲಲು ಬಿಡುವುದಿಲ್ಲ ಎಂದು ಮತ್ತೆ ಹೇಳಿದ್ದಾರೆ.
ನಾನು ಸಹ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆದರೆ ಒಂದೇ ಒಂದು ದಿನವೂ ಸಿಧು ರೀತಿ ನಡೆದುಕೊಂಡಿಲ್ಲ. ಅವರು ಸ್ಪರ್ಧಿಸಿದರೆ ಅವರ ವಿರುದ್ಧ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಸೆಪ್ಟಂಬರ್ 28ರಂದು ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚನ್ನಿ ಸಂಪುಟ ವಿಸ್ತರಣೆ ಕುರಿತು ಅಸಮಾಧಾನ ಹೊರ ಹಾಕಿದ್ದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಸಿಧು, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡೋದಾಗಿ ಹೇಳಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ