ಪಾಟಿ ಸವಾಲಿನ ವೇಳೆ ಸಂತ್ರಸ್ತೆ ಮುಂದೆ ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರ: ವಿಚಾರಣಾ ನ್ಯಾಯಾಲಯದ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ

ಮುಂಬೈ: ವಿಚಾರಣಾ ನ್ಯಾಯಾಲಯವೊಂದರಲ್ಲಿ ಪಾಟಿ ಸವಾಲಿನ ವೇಳೆ ಪ್ರತಿವಾದಿ ಪರ ವಕೀಲರು ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರಗಳನ್ನು ಸಂತ್ರಸ್ತೆಯ ಮುಂದೆ ಸಲಹೆಯ ಹೆಸರಿನಲ್ಲಿ ನಡೆಸಿರುವುದು ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ.
ಸಂತ್ರಸ್ತೆಗೆ ಕೇಳಲಾದ ಪ್ರಶ್ನೆಗಳು ಸೂಕ್ತ ರೀತಿಯ ಪಾಟಿ ಸವಾಲು ಎಂದು ಕರೆಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಾಧನಾ ಎಸ್ ಜಾಧವ್ ಮತ್ತು ಎಸ್. ವಿ. ಕೊತ್ವಾಲ್ ಅವರಿದ್ದ ಪೀಠ ಇತ್ತೀಚೆಗೆ ತಿಳಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಸಲಹೆ ನೀಡುವ ನೆಪದಲ್ಲಿ ಕೃತ್ಯದ ಇಂಚಿಂಚೂ ವಿವರಗಳನ್ನು ಸಾಕ್ಷಿಗೆ ನೀಡಲಾಯಿತು” ಎಂಬುದರ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಅಂತಹ ಪಾಟಿ ಸವಾಲಿಗೆ ಅವಕಾಶ ನೀಡಿದ ವಿಚಾರಣಾ ನ್ಯಾಯಾಧೀಶರ ನಿಷ್ಕ್ರಿಯತೆಯ ಬಗ್ಗೆಯೂ ಪೀಠ ಬೇಸರ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಸಂತ್ರಸ್ತೆ ಗದ್ಗದಿತಳಾಗಿದ್ದಳು ಎಂಬುದನ್ನು ಗಮನಿಸಿದ ಪೀಠ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಆಗ ಪಾಟಿ ಸವಾಲಿಗೆ ತಡೆಯೊಡ್ಡಬೇಕಿತ್ತು” ಎಂದು ಹೇಳಿತು.
ಈ ವಿಚಾರದಲ್ಲಿ ನ್ಯಾಯಾಧೀಶರ ಜಡ ಧೋರಣೆ ನಮಗೆ ಹೆಚ್ಚು ನೋವು ತಂದಿದೆ. ಇಂತಹ ಸಲಹೆಗಳು ಮೂಲಭೂತ ಘನತೆಯ ಎಲ್ಲ ಎಲ್ಲೆಗಳನ್ನು ಮೀರಿವೆ. ಅಪಮಾನಕರ ಅಥವಾ ಕಿರಿಕಿರಿಯಾಗುವಂತಹ ಯಾವುದೇ ಪ್ರಶ್ನೆಗಳನ್ನು ನಿರ್ಬಂಧಿಸುವ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 152 ಅನ್ನು ವಿಚಾರಣಾ ನ್ಯಾಯಾಲಯ ಉಲ್ಲಂಘಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸಲಹೆಗಳ ಬಗ್ಗೆ ಆಕ್ಷೇಪಿಸದೇ ಇರುವ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿಷ್ಕ್ರಿಯತೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಪೀಠವು ಈ ಎಲ್ಲ ಅಸಮಾಧಾನಗಳ ನಡುವೆಯೂ ವಿಚಾರಣೆಯನ್ನು ನಡೆಸಿದ ಮತ್ತು ಅದನ್ನು ಪೂರ್ಣಗೊಳಿಸಿದ ವಿಚಾರಣಾ ನ್ಯಾಯಾಲಯದ ಪ್ರಾಮಾಣಿಕ ಪ್ರಯತ್ನಗಳಿಗೆ ಮೆಚ್ಚುಗೆಯನ್ನೂ ಸೂಚಿಸಿದೆ.
ಏಪ್ರಿಲ್ 2010 ರಲ್ಲಿ ಆರೋಪಿಗಳಾದ ರಂಜಿತ್ ಗಾಡೆ, ಗಣೇಶ್ ಕಾಂಬ್ಳೆ ಮತ್ತು ಸುಭಾಷ್ ಭೋಸಲೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದರು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ 24 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement