ಮುಂಜಾನೆ ವಾಕಿಂಗ್‌ಗೆ ತೆರಳಿದ್ದ 7 ಮಕ್ಕಳು ನಾಪತ್ತೆ, ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿ ಆಸಕ್ತಿ ಎಂದು ಬರೆದಿಟ್ಟ ಪತ್ರಗಳು ಪತ್ತೆ

ಬೆಂಗಳೂರು : ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಏಳು ಮಕ್ಕಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಕ್ಕಳು ನಾಪತ್ತೆಯಾದ ಬೆನ್ನಲ್ಲೇ ಪೋಷಕರು ಕಂಗಾಲಾಗಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಮನೆಯಲ್ಲಿ ಒಂದೇ ರೀತಿಯ ಪತ್ರ ದೊರೆತಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಬೆಂಗಳೂರಿನ ಬಾಗಲಗುಂಟೆಯ ಶೇಷಾದ್ರಿ ಲೇಔಟ್‌ನ ನಿವಾಸಿಯಾಗಿರುವ ಕಿರಣ್‌ ಎನ್.‌ ( 15 ವರ್ಷ), ಪರೀಕ್ಷಿತ್‌ ವಿ. (15 ವರ್ಷ). ನಂದನ್‌ ಎಂ. (15 ವರ್ಷ) ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸೋಲದೇವನಹಳ್ಳಿಯ ಎಜಿಬಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಯನ್‌ ಸಿದ್ದಾರ್ಥ್‌ (12 ವರ್ಷ ) ಅಮೃತ ವರ್ಷೀಣಿ (12 ವರ್ಷ ), ಭೂಮಿ (12 ವರ್ಷ ) , ಚಿಂತನ್‌ (12 ವರ್ಷ) ನಾಪತ್ತೆಯಾಗಿದ್ದಾರೆ ಎಂದು ಮಕ್ಕಳ ಪೋಷಕರು ದೂರು ನೀಡಿದ್ದಾರೆ.
ಮುಂಜಾನೆ 5 ಗಂಟೆಯ ಸುಮಾರಿಗೆ ಮನೆಯಲ್ಲಿ ವಾಕಿಂಗ್‌ಗೆ ಹೋಗುವುದಾಗಿ ಹೇಳಿ ಮಕ್ಕಳು ಮನೆಗೆ ವಾಪಾಸಾಗಿರಲಿಲ್ಲ. ಬೆಳಗ್ಗೆ 8 ಗಂಟೆಯ ವರೆಗೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾದ ಪೋಷಕರು ಮಕ್ಕಳನ್ನು ಹುಡುಕಾಡುವುದಕ್ಕೆ ಶುರುಮಾಡಿದ್ದಾರೆ. ಸ್ನೇಹಿತರ ಮನೆಗೆ ಕರೆ ಮಾಡಿದಾಗ ತಮ್ಮ ಮಕ್ಕಳೂ ಕೂಡ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಎಲ್ಲ ಮಕ್ಕಳು ನಾಪತ್ತೆಯಾಗುವುದಕ್ಕೆ ಮೊದಲು ಬರೆದಿಟ್ಟಿದ್ದ ಪತ್ರಗಳು ಪತ್ತೆಯಾಗಿತ್ತು.
ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ನಂದನ್‌ ಎಂಬ ಬಾಲಕ ನನಗೆ ಕಬ್ಬಡ್ಡಿ ಆಟದಲ್ಲಿ ಹೆಚ್ಚಿನ ಆಸಕ್ತಿ ಇದ್ದು, ನಾನು ಏನಾದರೂ ಸಾಧನೆ ಮಾಡಿ, ಹಣಗಳಿಸಿ ಮನೆಗೆ ವಾಪಾಸು ಬರುತ್ತೇನೆ ಎಂದು ಪತ್ರ ಬರೆದಿದ್ದಾನೆ. ಈತನ ಜೊತೆಗೆ ನಾಪತ್ತೆಯಾಗಿರುವ ಪರೀಕ್ಷಿತ್‌ ಕೂಡ ನನಗೆ ಓದಿನಲ್ಲಿ ಆಸಕ್ತಿಯಿಲ್ಲ, ನಾನು ಯಾವುದಾದರೂ ಕ್ರೀಡೆಯಲ್ಲಿ ಸಾಧನೆ ಮಾಡಿ ಬರುತ್ತೇನೆ. ಆದರ ನನ್ನನ್ನು ಹುಡುಕಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕಿರಣ್‌ ಎಂಬಾತ ಕೂಡ ನಾಪತ್ತೆಯಾಗಿದ್ದು, ಮನೆಯಿಂದ ಹೋಗುವ ವೇಳೆಯಲ್ಲಿ ತಂದೆಯ ಮೊಬೈಲ್‌ ತೆಗೆದುಕೊಂಡು ಹೋಗಿದ್ದಾನೆ. ಆದರೆ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್‌ ಆಫ್‌ ಬರುತ್ತಿದೆ ಎಂದು ಪೋಷಕರು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಎಲ್ಲ ಮಕ್ಕಳು ಮನೆಯಲ್ಲಿ ವಾಕಿಂಗ್‌ಗೆ ತೆರಳುವುದಾಗಿ ಹೋಗಿದ್ದರು. ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿರುವ ಮಕ್ಕಳು ಮನೆಯಲ್ಲಿ ಒಂದೇ ರೀತಿಯ ಪತ್ರ ಸಿಕ್ಕಿದೆ. ಪತ್ರದಲ್ಲಿ ಸ್ಪೋರ್ಟ್‌ ಐಟಂ, ಚಪ್ಪಲಿ, ಬ್ರಶ್‌, ಪೇಸ್ಟ್‌, ವಾಟರ್‌ ಬಾಟಲಿ, ಹಣ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಏಳು ಮಕ್ಕಳು ನಾಪತ್ತೆಯಾಗಿರುವ ಕುರಿತು ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement