ಆಂಧ್ರಪ್ರದೇಶ ಸಿಎಂ ಜಗನ್ ವಿರುದ್ಧಆಕ್ಷೇಪಾರ್ಹ ಟೀಕೆ: ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಂದ ಟಿಡಿಪಿ ಕಚೇರಿಗೆ ನುಗ್ಗಿ ದಾಂಧಲೆ

ಹೈದರಾಬಾದ್: ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ಮಂಗಳಗಿರಿ, ವಿಶಾಖಪಟ್ಟಣಂ ಮತ್ತು ಇತರ ಸ್ಥಳಗಳಲ್ಲಿ ತೆಲುಗು ದೇಶಂ ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ವಿರೋಧ ಪಕ್ಷದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿ ಈ ದಾಂಧಲೆ ಮಾಡಿದೆ.
ಟಿಡಿಪಿ ವಕ್ತಾರ ಕೆ ಪಟ್ಟಾಭಿ ರಾಮ್ ಅವರು, ಮಾಜಿ ಸಚಿವ ನಕ್ಕ ಆನಂದ ಬಾಬು ಅವರಿಗೆ ಪೊಲೀಸ್ ನೋಟಿಸ್ ನೀಡುವುದನ್ನು ಆಕ್ಷೇಪಿಸಿ, ಜಗನ್ ಮೋಹನ್ ರೆಡ್ಡಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಕಾರಣಕ್ಕೆ ವೈಎಸ್‌ ಆರ್‌ ಕಾಂಗ್ರೆಸ್‌ ಕಾರ್ಯಕರ್ತರು ದಾಂಧಲೆ ಮಾಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ವೈಎಸ್‌ಆರ್‌ಸಿಪಿ ಗೂಂಡಾಗಳು ಪಕ್ಷದ ಪ್ರಧಾನ ಕಚೇರಿ ಮತ್ತು ವಿಶಾಖಪಟ್ಟಣಂನ ಕಚೇರಿ ಮತ್ತು ಪಕ್ಷದ ನಾಯಕರ ನಿವಾಸಗಳ ಮೇಲೆ ನಡೆಸಿದ ದಾಳಿಯನ್ನು ತೆಲುಗು ದೇಶಂ ಪಕ್ಷವು ಬಲವಾಗಿ ಖಂಡಿಸುತ್ತದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆಯೇ ಅಥವಾ ಫ್ಯಾಸಿಸ್ಟ್ ದೇಶದಲ್ಲಿದ್ದೇವೆಯೇ ಎಂಬುದು ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಮತ್ತು ಡಿಜಿಪಿ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಂಧ್ರಪ್ರದೇಶ ಟಿಡಿಪಿ ಅಧ್ಯಕ್ಷ ಅಚ್ಚಣ್ಣಾಯ್ಡು ಹೇಳಿದ್ದಾರೆ. ವಿಜಯವಾಡದಲ್ಲಿ ಪಟ್ಟಾಭಿಯ ನಿವಾಸದ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ವಿಫಲವಾದ ಕಾರಣಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಾಭಿಯವರ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯದಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಗೌತಮ್ ಸವಾಂಗ್ ಹೇಳಿದರು. ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸದಂತೆ ಜನರಿಗೆ ಮನವಿ ಮಾಡಿದ ಅವರು, ನಾಯಕರು ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಡಿಜಿಪಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದಾದ್ಯಂತ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರಚೋದನೆ ನೀಡದಂತೆ ಜನರನ್ನು ವಿನಂತಿಸಲಾಗಿದೆ. ಪ್ರಚೋದನಕಾರಿ ಟೀಕೆಗಳನ್ನು ಮಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಅವರು ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದಾರೆ.
ದಾಳಿಯಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದ ಪಕ್ಷದ ಹಿರಿಯ ಶಾಸಕ ಮಲ್ಲಾಡಿ ವಿಷ್ಣು,
ಈ ದಾಳಿಯಿಂದ ವೈಎಸ್‌ಆರ್ ಕಾಂಗ್ರೆಸ್‌ಗೆ ಯಾವ ಸಂಬಂಧವಿದೆ? ಅವರು ಸಾರ್ವಜನಿಕವಾಗಿ ನಮ್ಮ ಇಮೇಜ್ ಅನ್ನು ಹಾಳುಮಾಡಲು ನಮ್ಮ ಪಕ್ಷವನ್ನು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಕೆಟ್ಟ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ ವಿಷ್ಣು ಹೇಳಿದ್ದಾರೆ.
ದಾಳಿಯ ಸುದ್ದಿಯನ್ನು ಕೇಳಿದ ನಂತರ, ನಾಯ್ಡು ಮಂಗಳಗಿರಿಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿ ಘಟನೆಯ ಬಗ್ಗೆ ವಿಚಾರಿಸಿದರು. ಕೆಲವರು ಬಿಯರ್ ಬಾಟಲಿಗಳಿಂದ ದಾಳಿ ಮಾಡಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement