
ಪಾಟ್ನಾ: ವೃದ್ಧಾಪ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್ ಭಾನುವಾರ ತಮ್ಮ ಮನೆಗೆ ಹಿಂದಿರುಗಿದ್ದಾರೆ.
ಮೇವು ಹಗರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ ತಮ್ಮೂರಿನಿಂದ ದೂರವೇ ಇದ್ದರು.
ವಿಮಾನ ನಿಲ್ದಾಣದಿಂದ ಮನೆಗೆ ತೆರಳು ಹಾದಿಯಲ್ಲಿ ಲಾಲು ಅವರನ್ನು ಅವರ ಬೆಂಬಲಿಗರು ಸ್ವಾಗತಿಸಿದರು. ಸೆಪ್ಟೆಂಬರ್ 2018ರಲ್ಲಿ ಲಾಲು ಪ್ರಸಾದ್ ಯಾದವ್ ಒಮ್ಮೆ ಮಾತ್ರ ಮಗ ತೇಜ್ ಪ್ರತಾಪ್ ಮದುವೆಗೆಂದು ರಾಂಚಿಯಿಂದ ಜಾಮೀನಿನ ಮೇಲೆ ಪಾಟ್ನಾಕ್ಕೆ ಬಂದಿದ್ದರು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಹಲವು ಬಾರಿ ಜಾಮೀನು ವಾಯಿದೆಯನ್ನು ವಿಸ್ತರಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತೇಜ್ ಪ್ರತಾಪ್ ಮತ್ತು ತೇಜಸ್ವಿ ತಮ್ಮ ಬಹುಕಾಲದ ವೈಷಮ್ಯ ಮರೆತಂತೆ ಕಂಡುಬಂದರು.
ರಾಂಚಿಯಿಂದ ಬಂದ ಲಾಲು ಯಾದವ್ ನೇರವಾಗಿ ತಮ್ಮ ಪತ್ನಿಯ ಮನೆಗೆ ತೆರಳಿದರು. ತಮಗಾಗಿ ಕಾದು ನಿಂತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ.
ಬಿಹಾರ ವಿಧಾನಸಭೆಯಲ್ಲಿ ನಮ್ಮದೇ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಆರ್ಜೆಡಿ, ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎಯಿಂದ ಕೆಲ ಶಾಸಕರನ್ನು ಸೆಳೆದು ರಾಜ್ಯ ರಾಜಕಾರಣದ ಸಮೀಕರಣ ಬದಲಿಸುವ ಮಾತು ಆಡುತ್ತಿದೆ. ಆರ್ಜೆಡಿ ಮತ್ತು ಅದರ ಮೈತ್ರಿ ಪಕ್ಷ ಕಾಂಗ್ರೆಸ್ ನಡುವೆ ಸಂಬಂಧ ಹಳಸಿದೆ. 2024ರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ