ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಮುಂದೂಡಿದೆ. ನಾಳೆ (ಅಕ್ಟೋಬರ್ 27) ಮಧ್ಯಾಹ್ನ 2:30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಆರ್ಯನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದರು. ಆರ್ಯನ್ ಪರ ಮೊದಲು ವಾದ ಮಂಡಿಸಿದ್ದ ಸತೀಶ್ ಮಾನೆಶಿಂಧೆ ಕೂಡ ಹಾಜರಿದ್ದರು. ಎನ್ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದ ಮಂಡಿಸಿದರು.
23 ವರ್ಷದ ಆರ್ಯನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ. ವಿಶೇಷ ಅತಿಥಿಯಾಗಿ ಅವರನ್ನು ಪಾರ್ಟಿಗೆ ಕರೆಯಲಾಗಿತ್ತು. ಆರ್ಯನ್ನನ್ನು ಪಾರ್ಟಿಗೆ ಆಹ್ವಾನಿಸಿದ್ದು ಪ್ರತೀಕ್ ಗಾಬಾ. ಎನ್ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಏನೂ ಸಿಕ್ಕಿಲ್ಲ. ಡ್ರಗ್ಸ್ ಸೇವಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಬಂಧಿಸುವುದಕ್ಕೆ ಯಾವುದೇ ಕಾರಣ ಕೂಡ ಇರಲಿಲ್ಲ. ಈವರೆಗೆ ಆರ್ಯನ್ ಖಾನ್ಗೆ ಡ್ರಗ್ಸ್ ಟೆಸ್ಟ್ ಮಾಡಿಲ್ಲ. ಆರ್ಯನ್ ಖಾನ್ ಬಂಧನ ಕಾನೂನುಬಾಹಿರ ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದರು.
ಬಂಧಿತ ಯುವಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಿ. ಆರ್ಯನ್ ಖಾನ್ರನ್ನು ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಯಾವುದೇ ಹಣಕಾಸು ಮಾಡಿಲ್ಲ. ಸೆಕ್ಷನ್ 27A ಆರ್ಯನ್ ಖಾನ್ಗೆ ಅನ್ವಯಿಸುವುದಿಲ್ಲ. ಡ್ರಗ್ಸ್ ಕಳ್ಳಸಾಗಣೆಗಾಗಿ ಆರ್ಯನ್ ಯಾರಿಗೂ ಹಣ ನೀಡಿಲ್ಲ ಎಂದು ರೋಹಟಗಿ ವಾದ ಮಂಡಿಸಿದ್ದಾರೆ.
ಎನ್ ಸಿಬಿ ಅಧಿಕಾರಿಗಳು ಪೊಲೀಸರಂತೆ ವರ್ತಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೇವೆ. ಬೇರೆಯವರ ಶೂನಲ್ಲಿ ಡ್ರಗ್ಸ್ ಸಿಕ್ಕಿದರೆ ಆತನನ್ನು ಏಕೆ ಬಂಧಿಸಲಾಯ್ತು. ಬೇರೆಯವರ ಬಳಿ ಸಿಕ್ಕರೆ ಅದಕ್ಕೆ ಆತ ಜವಾಬ್ದಾರನಲ್ಲ. ಆತನ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿದೆ. ಕೆಲವು ವಾಟ್ಸ್ ಅಪ್ ಚಾಟ್ಸ್ ಮೊಬೈಲ್ ನಿಂದ ತೆಗೆಯಲಾಗಿದೆ. ಯಾವುದೇ ಸಂಭಾಷಣೆಗಳು ಕ್ರೂಸ್ ಪಾರ್ಟಿಗೆ ಸಂಬಂಧಿಸಿದ್ದಲ್ಲ. ಇದು ಈ ಪ್ರಕರಣದಲ್ಲಿ ಪಿತೂರಿ ಹೇಗೆ ಆಗುತ್ತದೆ. ಡ್ರಗ್ಸ್ ಸೇವನೆ, ಮಾರಾಟ ಅಥವಾ ಖರೀದಿಯಲ್ಲಿ ಆರ್ಯನ್ ಭಾಗಿಯಾಗಿಲ್ಲ ಎಂದು ಆರ್ಯನ್ ಖಾನ್ ಪರವಾಗಿ ರೋಹಟಗಿ ವಾದಿಸಿದರು.
ಸಾಕ್ಷಿ ಸಲ್ಲಿಸಿರುವ ಅಫಿಡವಿಟ್ ಗೂ ಆತನಿಗೂ ಸಂಬಂಧವಿಲ್ಲ. ಸಾಕ್ಷಿ ಸಲ್ಲಿಸಿರುವ ಅಫಿಡವಿಟ್ ರಾಜಕೀಯ ಪ್ರೇರಿತ ಎಂದಿದ್ದಾರೆ. ಇಲ್ಲ ಸಲ್ಲದ ವಿವಾದಗಳಿಗೆ ಆತನನ್ನು ಎಳೆದು ತರುತ್ತಿದ್ದಾರೆ. 2018-19ರಲ್ಲಿ ಮಾಡಿರುವ ಚಾಟ್ಸ್ ಅನ್ನು ಈಗ ಮುನ್ನಲೆಗೆ ತರಲಾಗಿದೆ. ಈ ಪ್ರಕರಣಕ್ಕೂ ಚಾಟ್ಸ್ ಗಳಿಗೂ ಸಂಬಂಧವಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು.
ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎನ್ ಡಬ್ಲ್ಯೂ ಸಾಂಬ್ರೆ ಅವರ ಏಕ ಪೀಠ ವಿಚಾರಣೆ ನಡೆಸಿತು. 23ರ ಹರೆಯದ ಯುವಕ ಕೇವಲ ಡ್ರಗ್ಸ್ ಸೇವನೆ ಮಾಡದೇ ಅಕ್ರಮ ಮಾದಕ ದ್ರವ್ಯ ಸಾಗಾಟದಲ್ಲಿ ಭಾಗಿಯಾಗಿದ್ದಾನೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರೋಪಿಸಿದೆ. ಇದು ಮಾತ್ರವಲ್ಲದೆ ಆರ್ಯನ್ ಮತ್ತು ಎಸ್ಆರ್ಕೆ ಮ್ಯಾನೇಜರ್ ಪೂಜಾ ದಾದ್ಲಾನಿ, ತನಿಖೆಯನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ ಪ್ರಕರಣದ ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ತಿರುಚುತ್ತಿದ್ದಾರೆ ಎಂದು ಎನ್ಸಿಬಿ ಹೇಳಿದೆ.
ಇದು ಪ್ರಭಾಕರ್ ಸೈಲ್ ಒಬ್ಬನ ಉದ್ದೇಶಪೂರ್ವಕ ಅಫಿಡವಿಟ್ನ ವಿಷಯಗಳಿಂದ ಸ್ಪಷ್ಟವಾಗಿದೆ” ಎಂದು ಪ್ರಕರಣದ ಸ್ವತಂತ್ರ ಸಾಕ್ಷಿಯಾಗಿರುವ ಸೈಲ್ ಮಾಡಿದ ಸುಲಿಗೆ ಯತ್ನದ ಆರೋಪಗಳನ್ನು ಉಲ್ಲೇಖಿಸಿ ಎನ್ಸಿಬಿ ಹೇಳಿದೆ. ಅಫಿಡವಿಟ್ನಲ್ಲಿ ಪೂಜಾ ದದ್ಲಾನಿ ಅವರನ್ನು ಉಲ್ಲೇಖಿಸಲಾಗಿದೆ ಮತ್ತು “ತನಿಖೆ ನಡೆಯುತ್ತಿರುವಾಗ ಈ ಮಹಿಳೆ ಪಂಚ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತೆ ತೋರುತ್ತಿದೆ” ಎಂದು ಹೇಳಿದೆ.
ನಂತರ, ಆರ್ಯನ್ ಖಾನ್ ಪರವಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಯಿತು, ಅದು ತನ್ನ ಕಡೆಯಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳೊಂದಿಗೆ ಯಾವುದೇ ಒಪ್ಪಂದವಿಲ್ಲ ಎಂದು ತಿಳಿಸಿತು, ಇದು ರಾಜಕಾರಣಿಗಳು ಮತ್ತು ಎನ್ಸಿಬಿ ನಡುವಿನ ವಿಷಯವಾಗಿದೆ ಎಂದು ಹೇಳಿದೆ.
ಆರ್ಯನ್ ಪರವಾಗಿ ಸಲ್ಲಿಸಿದ ಅಫಿಡವಿಟ್ನಲ್ಲಿ ಪ್ರಭಾಕರ್ ಸೈಲ್ ಪರಿಚಯವಿಲ್ಲ ಮತ್ತು ತನಗೆ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ ಮತ್ತು ಇತ್ತೀಚೆಗೆ ಮಾಡಲಾಗುತ್ತಿರುವ ಆರೋಪಗಳಿಗೂ 23 ವರ್ಷದ ಆರ್ಯನ್ಗೂ ಯಾವುದೇ ಸಂಬಂಧವಿಲ್ಲ. ಎನ್ಸಿಬಿ ಅಧಿಕಾರಿಗಳ ವಿರುದ್ಧ ಆರ್ಯನ್ ಖಾನ್ ಯಾವುದೇ ಆರೋಪ ಮಾಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ