ರೈಲ್ವೆ ನಕಲಿ ನೇಮಕಾತಿ ದಂಧೆಯಲ್ಲಿ 22 ಕೋಟಿ ರೂ. ವಂಚಿಸಿದವರ ಬಂಧನ

ಮೈಸೂರು: ರೈಲ್ವೆ ಇಲಾಖೆಯಲ್ಲಿ ನಕಲಿ ನೇಮಕಾತಿಯ ದೊಡ್ಡ ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳವು ಭೇದಿಸಿದೆ.
ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇದು ಸುಮಾರು 400 ಅಭ್ಯರ್ಥಿಗಳಿಗೆ ಕೆಲಸದ ಆಮಿಷ ತೋರಿಸಿ 22 ಕೋಟಿ ರೂ. ವಂಚಿಸಿರುವ ಪ್ರಕರಣವಾಗಿದೆ.
ಮೈಸೂರಿನ ಚಂದ್ರಗೌಡ ಎಸ್.ಪಾಟೀಲ್ ಬಿನ್ ಸೋಮನಗೌಡ ಹಾಗೂ ಗದಗದ ಶಿವಸ್ವಾಮಿ ಬಿನ್ ಪಾಪಣ್ಣ ಬಂಧಿತ ಆರೋಪಿಗಳು. ಇವರಲ್ಲಿ ಶಿವಸ್ವಾಮಿ ನಿವೃತ್ತ ರೈಲ್ವೆ ನೌಕರ. ಬಂಧಿತರು 400 ಮಂದಿ ಉದ್ಯೋಗಾಕಾಂಕ್ಷಿಗಳಿಂದ ಸುಮಾರು 22 ಕೋಟಿ ರೂ. ವಂಚಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಆಂದೋಲನ ವರದಿ ಮಾಡಿದೆ.
ವರದಿ ಪ್ರಕಾರ, ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್‌ಗಳು, 4,15,000 ರೂ. ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದರು. ಈ ಪ್ರಕರಣ ಬೆನ್ನಹತ್ತಿದ ರೈಲ್ವೆ ಸಂರಕ್ಷಣಾ ಪಡೆ, ವಂಚಕರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು. ಇವರು ಯುವ ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕ ರೈಲ್ವೆ ಉದ್ಯೋಗಗಳ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೆ ನೇಮಕಾತಿ ದಂಧೆಯನ್ನು ನಡೆಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿತು.
ತಂಡವನ್ನು ಸಾಕ್ಷಿ ಸಮೇತ ಸೆರೆ ಹಿಡಿದ ರೈಲ್ವೆ ಸಂರಕ್ಷಣಾ ಪಡೆಯು ಅಗತ್ಯ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತರಾದ ಥಾಮಸ್ ಜಾನ್, ಸಹಾಯಕ ಭದ್ರತಾ ಆಯುಕ್ತರಾದ ಎ.ಶ್ರೀಧರ್‍ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸತೀಶನ್, ಎಂ.ನಿಶಾದ್, ವೆಂಕಟೇಶ್, ರಾಧಾಕೃಷ್ಣ ಮತ್ತು ಇತರೆ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಸದರಿ ಪ್ರಕರಣವನ್ನು ಮುಂದುವರಿದ ತನಿಖೆಗಾಗಿ ಎನ್.ಆರ್. ಠಾಣೆಗೆ ಹಸ್ತಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 20ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ, ಎರಡು ಚುನಾವಣಾ ಸಮಾವೇಶದಲ್ಲಿ ಭಾಗಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement