ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ರಾಜ್ಯವೇ ಶೋಕದಲ್ಲಿ ಮುಳುಗಿದೆ. ಪುನೀತ್ ರಾಜ್ಕುಮಾರ್ ಅವರನ್ನು ದಾಖಲು ಮಾಡಿದ್ದ ವಿಕ್ರಂ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಗುರುವಾರವಷ್ಟೇ (ಅ.28) ಪುನೀತ್ ನನ್ನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು ಎಂದು ತಿಳಿಸಿದರು.
ನನಗೆ ನಿನ್ನೆ ಫೋನ್ ಮಾಡಿ ಪುನೀತ್ ರಾಜ್ಕುಮಾರ್ ಮಾತನಾಡಿದ್ದರು. ಅವರನ್ನು ಭೇಟಿ ಮಾಡಲು ಇವತ್ತು ಸಮಯ ನಿಗದಿ ಆಗಿತ್ತು. ನವೆಂಬರ್ 1ರಂದು ಅವರ ವೆಬ್ಸೈಟ್ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ನೀಡಲು ಅವರು ಬರಬೇಕಿತ್ತು. ಆದರೆ ವಿಧಿ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿದೆ. ಬಹಳ ದೊಡ್ಡ ಆಘಾತವಾಗಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪುನೀತ್ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ. ಡಾ. ರಾಜ್ಕುಮಾರ್ ಅವರ ಸಂಸ್ಕಾರದಲ್ಲಿ ಪುನೀತ್ ಬೆಳೆದಿದ್ದರು. ಅವರ ನಡೆ, ನುಡಿ ಎಲ್ಲವೂ ರಾಜ್ಕುಮಾರ್ ರೀತಿಯೇ ಅತ್ಯಂತ ವಿನಯಪೂರ್ವಕವಾಗಿತ್ತು. ನಾನು ಎರಡು ತಿಂಗಳ ಹಿಂದೆ ಅವರು ಕರೆದು ಒಂದು ಸಭೆಗೆ ಹೋಗಿ ಎಜುಕೇಷನ್ ಆ್ಯಪ್ ಉದ್ಘಾಟನೆ ಮಾಡಿದ್ದೆ. ಅದಾದ ಬಳಿಕವೂ ಭೇಟಿ ಆಗಿದ್ದೆ. ಅವರು ಕುಟುಂಬದ ಜೊತೆ ನನಗೆ ಬಹಳ ವರ್ಷದಿಂದಲೂ ಒಡನಾಟ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ