ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನರಾಗಿದ್ದಾರೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲು ಬಹುತೇಕರಿಗೆ ಆಗುತ್ತಿಲ್ಲ. ಸದಾ ನಗುನಗುತ್ತ ಲವಲವಿಕೆಯಿಂದ ಇರುತ್ತಿದ್ದ, ತಮ್ಮ ಮಾತುಗಳಿಂದ ಎಲ್ಲರನ್ನೂ ನಗಿಸುತ್ತಿದ್ದ ಅವರು ಈಗ ಮಾತು ನಿಲ್ಲಿಸಿದ್ದಾರೆ. ಶಾಂತವಾಗಿ ಮಲಗಿದ ಅವರನ್ನು ಕಂಡು ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಮತ್ತು ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನಕ್ಕೆ ಬಂದವರು ಪಾರಥಿಕ ಶರೀರ ನೋಡುತ್ತಲೇ ಬಿಕ್ಕಬಿಕ್ಕಿ ಅಳುತ್ತಿದ್ದಾರೆ.
ಶುಕ್ರವಾರರಾತ್ರಿಯಿಡೀ ಜನಸಾಗರ ಹರಿದುಬಂದಿದೆ. ಗುರುವಾರ ರಾತ್ರಿವರೆಗೂ ನಗುನಗುತ್ತಾ, ಹಾಡಿ ಕುಣಿಯುತ್ತಿದ್ದ ಪುನೀತ್ ರಾಜ್ಕುಮಾರ್ ಹೀಗೆ ಏಕಾಏಕಿ ಹೊರಟು ಹೋಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಕೊನೇ ಬಾರಿ ಅವರ ಮುಖ ನೋಡಬೇಕು ಎಂದು ಎಲ್ಲರೂ ಕಂಠೀರವ ಸ್ಟೇಡಿಯಂ ಬಳಿ ಬರುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರು ಮಾತ್ರವಲ್ಲದೇ, ಪರಭಾಷೆಯ ಸೆಲೆಬ್ರಿಟಿಗಳು ಕೂಡ ಅಪ್ಪುಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ನಟ ‘ಡಾರ್ಲಿಂಗ್’ ಕೃಷ್ಣ ಅವರು ಪುನೀತ್ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ತಮಿಳು ನಟ ಶರತ್ಕುಮಾರ್ ಕೂಡ ಪುನೀತ್ ಅಂತಿಮ ದರ್ಶನ ಪಡೆದರು. ಕಣ್ಣೀರು ತಡೆಯಲಾಗದೇ ಗಳಗಳನೆ ಅತ್ತರು. ದುಃಖ ತಾಳಲಾರದ ಅನೇಕ ಅಭಿಮಾನಿಗಳು ಬ್ಯಾರಿಕೇಡ್ಗಳನ್ನೂ ದೂಡಿಕೊಂಡು ಅಥವಾ ಹಾರಿಕೊಂಡು ಬರುತ್ತಿದ್ದಾರೆ. ಮಹಿಳೆಯರು ಕೂಡಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಶನಿವಾರ (ಅ.30) ದಿನವಿಡೀ ಅಭಿಮಾನಿಗಳಿಗೆ ಅಂತಿಮ ದರ್ಶನದ ಅವಕಾಶ ಮಾಡಿಕೊಡಲಾಗುತ್ತಿದೆ. ದೂರದೂರದ ಊರುಗಳಿಂದ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಪುನೀತ್ ಕುಟುಂಬದವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ