ಪುನೀತ್ ನಿಧನದ ಹಿನ್ನೆಲೆ: ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಮಾರ್ಗಸೂಚಿ-ಡಾ.ಸುಧಾಕರ

ಚಿಕ್ಕಬಳ್ಳಾಪುರ: ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಧ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಮ್ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮಾರ್ಗಸೂಚಿಗಳ ರಚನೆ ಮಾಡುವ ಚಿಂತನೆ ನಡೆದಿದೆ ಎಂದುಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಟ ಪುನೀತ್ ಸಾವಿನ ನಂತರ ಜಿಮ್ ಬಗ್ಗೆ ಗೊಂದಲದ ಪ್ರಶ್ನೆ ಉದ್ಭವವಾಗಿದೆ. ಬಹಳ ಜನ ಜಿಮ್ ಮಾಡಬೇಕೇ ಬೇಡವೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಒಂದೆರೆಡು ಈ ರೀತಿಯ ಪ್ರಕರಣಗಳಿಂದ ಜಿಮ್ ಮಾಡುವುದೇ ತಪ್ಪು ಎಂಬ ನಿರ್ಧಾರ ಸರಿ ಅಲ್ಲ. ಹೀಗಾಗಿ ಈ ಬಗ್ಗೆ ಹೆಸರಾಂತ ಹೃದಯ ತಜ್ಞರ ವರದಿ ತಯಾರಿ ಮಾಡಲಿದ್ದೇವೆ. ಜಿಮ್‌ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮಾರ್ಗಸೂಚಿಗಳ ರಚನೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಜಿಮ್ ಫಿಟ್‍ನೆಸ್ ಸೆಂಟರ್‌ಗಳಲ್ಲಿ ಸಮಸ್ಯೆ ಬಂದಾಗ ಯಾವ ರೀತಿ ನಿಭಾಯಿಸಬೇಕು ಎಂಬ ಪ್ರಥಮ ಚಿಕಿತ್ಸೆಯಿಂದ ಹಿಡಿದು ಆಸ್ಪತ್ರೆ ದಾಖಲಾಗುವವರೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಜಿಮ್ ಟ್ರೈನರ್ಸ್‍ಗೆ ತರಬೇತಿ ನೀಡಲಾಗುವುದು. ನಾನು ಸಹ ಹೆಸರಾಂತ ಹೃದಯ ತಜ್ಞರ ಜೊತೆ ವಿಚಾರ ಮಾಡಿದ್ದೇನೆ. ರಾಜ್ಯದ ಹಲವು ಪ್ರಖ್ಯಾತ ಹೃದಯ ತಜ್ಞರು ಹಾಗೂ ಅಮೆರಿಕದ ಖ್ಯಾತ ಹೃದಯ ತಜ್ಞರ ಜೊತೆ ಸಹ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ನನಗೆ ಬಹಳ ಆತ್ಮೀಯರು. ಇತ್ತೀಚೆಗೆ ಅವರ ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ನಮ್ಮ ಮನೆಗೆ ಬಂದು ಜೊತೆಯಲ್ಲಿ ಊಟ ಮಾಡಿದ್ದೇವೆ. ಅವರ ನೆನಪು ಮರೆಯಾಗುವುದಿಲ್ಲ. ಈ ಘಟನೆ ಇದು ದುರದೃಷ್ಟಕರ, ವಿಧಿ ಬರಹ. 16 ವರ್ಷದ ಹಿಂದೆ ನಾನು ಅವರು ಒಂದೇ ಸಲ ಜಿಮ್ ಸ್ಟಾರ್ಟ್ ಮಾಡಿದ್ದೆವು. ನಾನು. ಅವರು ರಾಘವೇಂದ್ರ ರಾಜಕುಮಾರ್ ಜಿಮ್ ಮಾಡುದ್ದೆವು. ಅವರು ಆರೋಗ್ಯಕ್ಕೆ ಹೆಚ್ಚು ಲಕ್ಷ್ಯ ಕೊಡುತ್ತಿದ್ದರು. ಯಾವುದೇ ದುರ್ಗುಣಗಳಿರಲಿಲ್ಲ. ಆದರೂ ಕೂಡ ವಿಧಿ ಬರಹ, ಬಹಳ ಬೇಗ ತಂದೆ ತಾಯಿ ದೇವರ ಬಳಿ ಹೋಗಿದ್ದಾರೆ. ಇಡೀ ರಾಜ್ಯ ಎರಡು ದಿನದಿಂದ ಶೋಕಾಚರಣೆಯಲ್ಲಿ ಮುಳುಗಿದೆ. ಬಹಳ ನೋವಾಗಿದೆ. ಭಗವಂತ ಅವರ ಕುಟುಂಬಕ್ಕೆ ಆಸರೆಯಾಗಿ ಶಕ್ತಿ ತುಂಬಲಿ. ಹೆಣ್ಣು ಮಕ್ಕಳಿಗೆ ಎಲ್ಲಾ ಧೈರ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ ಅಂತ ಹಾರೈಸುತ್ತೇನೆ ಎಂದು ಹೇಳಿದರು

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement