ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 17 ಆರೋಪಿಗಳ ವಿರುದ್ಧ ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಆರೋಪ ರೂಪಿಸಿದೆ. ಪ್ರಕರಣದ ವಿಚಾರಣೆ ಆರಂಭಿಸಲು ನ್ಯಾಯಾಲಯ ಡಿಸೆಂಬರ್ 8ರಂದು ದಿನಾಂಕ ಪ್ರಕಟಿಸಲಿದೆ.
ಈ ಕುರಿತು ಬಾರ್ ಅಂಡ್ ಬೆಂಚ್ ವರದಿ ಮಾಡಿದ್ದು, ವರದಿ ಪ್ರಕಾರ, ಅಮೋಲ್ ಕಾಳೆ ಸೇರಿದಂತೆ 17 ಆರೋಪಿಗಳ ವಿರುದ್ಧ ಆರೋಪ ರೂಪಿಸಲಾಗಿದೆ.
ವಿಚಾರಣೆ ಸುಗಮವಾಗಿ ನಡೆಸುವ ಉದ್ದೇಶದಿಂದ ನಿರ್ದಿಷ್ಟ ಆದೇಶ ಇಲ್ಲದೆ ಯಾವುದೇ ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸದಂತೆಯೂ ನ್ಯಾಯಾಲಯ ಸೂಚಿಸಿದೆ. ವರ್ಚುವಲ್ ವಿಧಾನದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಲಾಪದಲ್ಲಿ ಆರೋಪಿಗಳಿಗೆ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಆರೋಪಗಳನ್ನು ಓದಿ ಹೇಳಲಾಯಿತು. ಕೊಲೆ, ಕ್ರಿಮಿನಲ್ ಪಿತೂರಿ, ಸಂಘಟಿತ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳು, 2000ರ ಕರ್ನಾಟಕ ಸಂಘಟಿತ ಅಪರಾಧ ಕಾಯಿದೆ ಹಾಗೂ 1959ರ ಶಸ್ತ್ರಾಸ್ತ್ರ ಕಾಯಿದೆ, ಅಡಿಯಲ್ಲಿ ಆರೋಪಗಳನ್ನು ರೂಪಿಸಲಾಯಿತು ಎಂದು ವರದಿ ಹೇಳಿದೆ.
ಆರೋಪಿಗಳು ಮುಂಬೈ, ಪುಣೆ ಸೇರಿದಂತೆ ವಿವಿಧ ಜೈಲುಗಳಲ್ಲಿದ್ದು ವಿಚಾರಣೆ ಸಂದರ್ಭದಲ್ಲಿ ಎಲ್ಲರೂ ಹಾಜರಾಗುತ್ತಿರಲಿಲ್ಲ. ಅಲ್ಲದೆ ಕೋವಿಡ್ ಪರಿಸ್ಥಿತಿಯಿಂದಾಗಿಯೂ ವಿಚಾರಣೆ ಆರಂಭ ವಿಳಂಬವಾಗಿತ್ತು. ಹೀಗಾಗಿ ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎ ಬಿ ಕಟ್ಟಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಆರೋಪ ನಿಗದಿಗೊಳಿಸಲು ನಿರ್ಧರಿಸಿದ್ದರು. ಮುಂಬೈನ ಆರ್ಥರ್ ರೋಡ್ ಜೈಲು, ಪುಣೆಯ ಯರವಾಡ ಜೈಲು, ತುಮಕೂರು, ಮೈಸೂರು, ಬಳ್ಳಾರಿ ಹಾಗೂ ಶಿವಮೊಗ್ಗದ ಜೈಲುಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರುವಂತೆ ಕಳೆದ ಸೆಪ್ಟೆಂಬರ್ನಲ್ಲಿ ಆದೇಶಿಸಿದ್ದರು ಎಂದು ವರದಿ ಹೇಳಿದೆ.
ಗೌರಿ ಲಂಕೇಶ ಅವರನ್ನು ಅವರನ್ನು 5 ಸೆಪ್ಟೆಂಬರ್ 2017ರಂದು ದುಷ್ಕರ್ಮಿಗಳು ಬೆಂಗಳೂರಿನ ಅವರ ನಿವಾಸದೆದುರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ