ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳು ದುಃಖ ಪಡುತ್ತಿದ್ದರೆ ಕಿಡಿಗೇಡಿಯೊಬ್ಬ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು ಆತನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
‘ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.
ಪುನೀತ್ ನಿಧನದ ಬಳಿಕ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಮಂದಿಗೆ ಇದರಿಂದ ಕಿರಿಕಿರಿ ಆಗಿತ್ತು. ಹಾಗಾಗಿ ಪುನೀತ್ ರಾಜ್ಕುಮಾರ್ಗೆ ಅಗೌರವ ತೋರುವಂತಹ ಪೋಸ್ಟ್ಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಿತ್ವಿಕ್ಸ್ (ritvikks) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೀರಾ ಅಶ್ಲೀಲ ಪದಗಳನ್ನು ಬಳಸಿ ಪುನೀತ್ ರಾಜ್ಕುಮಾರ್ ಅವರಿಗೆ ಅವಮಾನ ಮಾಡಲಾಗಿತ್ತು.
ನಿಷೇಧದ ನಡುವೆಯೂ ರಿತ್ವಿಕ್ಸ್ ಎಂಬ ಈ ವ್ಯಕ್ತಿಗೆ ಲಿಕ್ಕರ್ ಸಿಕ್ಕಿತ್ತು. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಶ್ಲೀಲ ಪದಗಳಿಂದ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸಿದ್ದ. ಬಿಯರ್ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು…. ಮಾಡುತ್ತೇವೆ’ ಎಂದು ಆತ ಬರೆದುಕೊಂಡಿದ್ದ.
ಕಿಡಿಗೇಡಿಯ ಈ ಪೋಸ್ಟ್ಗೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ‘ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದರು. ಎಲ್ಲದರ ಫಲವಾಗಿ ಈಗ ಆ ಕಿಡಿಗೇಡಿಯ ಬಂಧನ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ