ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನೂರಿಗೆ ಬಸ್​ ಸಂಪರ್ಕ ಪಡೆದ ಬಾಲಕಿ…!

ಹೈದರಾಬಾದ್: ತೆಲಂಗಾಣದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ತನ್ನ ಗ್ರಾಮಕ್ಕೆ ಸ್ಥಗಿತಗೊಂಡಿರುವ ಬಸ್ ಸೇವೆಯನ್ನು ಮರುಸ್ಥಾಪಿಸಲು ಸಹಾಯ ಕೋರಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಪತ್ರ ಬರೆದಿದ್ದಾಳೆ.
ಮುಖ್ಯನ್ಯಾಯಮೂರ್ತಿಗಳು ಈ ಪತ್ರವನ್ನು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ)ಗೆ ಕಳುಹಿಸಿದ ನಂತರ ರಂಗಾ ರೆಡ್ಡಿ ಜಿಲ್ಲೆಯ ಈ ಗ್ರಾಮಕ್ಕೆ ಬಸ್ ಸೇವೆಯನ್ನು ಪುನಃಸ್ಥಾಪಿಸಿದೆ ಎಂದು ಟಿಎಸ್‌ಆರ್‌ಟಿಸಿ ಪತ್ರಿಕಾ ಪ್ರಕಟಣೆ ಬುಧವಾರ ತಿಳಿಸಿದೆ.
ಕೊವಿಡ್​ ಸಾಂಕ್ರಾಮಿಕದ ನಂತರ ತೆಲಂಗಾಣದ ಬಹುತೇಕ ಹಳ್ಳಿಗಳಿಗೆ ಬಸ್​ ಸಂಚಾರ ಸ್ಥಗಿತಗೊಂಡಿತ್ತು. ಅದೇರೀತಿ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಪಿ. ವೈಷ್ಣವಿ ಎಂಬವಳ ಗ್ರಾಮಕ್ಕೂ ಸ್ಥಗಿತಗೊಂಡಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭಿಸದ ಕಾರಣ ಶಾಲೆ ಮತ್ತು ಕಾಲೇಜಿಗೆ ಹೋಗಲು ತೊಂದರೆಯಾಗಿತ್ತು. ಇದರಿಂದ ನೊಂದ ವೈಷ್ಣವಿ ಬಸ್​ ವ್ಯವಸ್ಥೆಯಿಲ್ಲದ ಕಾರಣ ಶಾಲೆ ಮತ್ತು ಕಾಲೇಜಿಗೆ ಹೋಗಲು ತೊಂದರೆಯಾಗಿದ್ದು, ತನಗೆ ಹಾಗೂ ತನ್ನಂಥ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಕೋರಿ ಆಕೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಪತ್ರ ಬರೆದಿದ್ದಳು.
ಕೊರೊನಾದಿಂದ ನನ್ನ ತಂದೆ ಮೃತಪಟ್ಟಿದ್ದಾರೆ. ಅಂದಿನಿಂದಲೂ ನನ್ನ ತಾಯಿಯೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ. ನಾವು ಶಾಲೆ, ಕಾಲೇಜಿಗೆ ಹೋಗಬೇಕೆಂದರೆ ಬಸ್‌ ಇಲ್ಲ. ಹೀಗಾಗಿ ದಿನಕ್ಕೆ ಆಟೋಗೆ 150 ರೂ. ಖರ್ಚು ಮಾಡಬೇಕಾಗಿದೆ. ಕಾಲೇಜಿಗೆ ನಮ್ಮ ಊರಿನಿಂದ 18 ಕಿ.ಮೀ. ಆಗುತ್ತದೆ. ನಮ್ಮೂರಿನ ಬಹುತೇಕ ಮಕ್ಕಳು ಇದೇ ಕಾರಣಕ್ಕೆ ಶಾಲೆ- ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದಿದ್ದಾರೆ ಎಂದು ರಂಗಾರೆಡ್ಡಿ ಜಿಲ್ಲೆಯ ಮಂಚಾಲ್ ಮಂಡಲದ ಚಿಡೇಡು ಗ್ರಾಮದಲ್ಲಿ ವಾಸವಾಗಿರುವ ವೈಷ್ಣವಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಳು
ಈ ವಿಷಯದ ಕುರಿತು ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಪತ್ರ ಕಳುಹಿಸಿದರು. ಬಳಿಕ ರಂಗಾ ರೆಡ್ಡಿ ಜಿಲ್ಲೆಯ ಗ್ರಾಮಕ್ಕೆ ಬಸ್ ಸೇವೆಯನ್ನು ಪುನಃ ಸ್ಥಾಪಿಸಲಾಗಿದೆ ಎಂದು ಟಿಎಸ್‌ಆರ್‌ಟಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ. ತಮ್ಮ ಸ್ನೇಹಿತರು ಮತ್ತು ಇತರ ಗ್ರಾಮಸ್ಥರು ಸಹ ಬಸ್ ಸೇವೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಾಲಕಿ ಪತ್ರದಲ್ಲಿ ವಿವರಿಸಿದ್ದಾಳೆ.
ಆಕೆಯ ಪತ್ರಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಮಕ್ಕಳ ಶಿಕ್ಷಣದ ಹಕ್ಕನ್ನು ಗೌರವಿಸುವ ಸಂಕೇತವಾಗಿ ಶಾಲಾ ಸಮಯಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಬಸ್ ಸೇವೆಯನ್ನು ಮರುಸ್ಥಾಪಿಸುವಂತೆ ಟಿಎಸ್‌ಆರ್‌ಟಿಸಿ (TSRTC)ಯ ಎಂಡಿ ವಿ.ಸಿ ಸಜ್ಜನರ್ ಅವರಿಗೆ ಸೂಚಿಸಿದ್ದಾರೆ ಎಂದು ಟಿಎಸ್‌ಆರ್‌ಟಿಸಿ ತಿಳಿಸಿದೆ. ಇಡೀ ತೆಲಂಗಾಣ ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಪರ್ಕವನ್ನು ಒದಗಿಸುವುದಾಗಿ ಟಿಎಸ್‌ಆರ್‌ಟಿಸಿ (TSRTC)ಯ ಭರವಸೆ ನೀಡಿದೆ. ನಿಗಮದ ಅಧಿಕಾರಿಗಳು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಮನವಿಯಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ 30 ಬಸ್​ಗಳ ಸೇವೆಗಳನ್ನು ಈಗಾಗಲೇ ಮರು ಸ್ಥಾಪಿಸಿದ್ದಾರೆ ಎಂದು ಎಂಡಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement