ನವದೆಹಲಿ: ಬಿಹಾರ, ಉತ್ತರಪ್ರದೇಶ, ಜಾರ್ಖಂಡ ಸೇರಿ ಹಲವು ರಾಜ್ಯಗಳಲ್ಲಿ ಛಠ್ ಜೋರಾಗಿ ನಡೆಯುತ್ತಿದೆ. ಹೀಗಾಗಿ ಜನರು ಯಮುನಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಆದರೆ ಯಮುನಾ ನದಿ ವಿಷಪೂರಿತ ನೊರೆಯಿಂದ ತುಂಬಿ ಹೋಗಿದೆ. ವಿಷಯುಕ್ತ ನದಿಯಲ್ಲಿಯೇ ಜನ ಮುಳುಗೇಳುತ್ತಿದ್ದಾರೆ. ಬುರುಗು ನೊರೆಯ ಮಧ್ಯೆಯೇ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ತೀವ್ರ ಟೀಕೆಯೂ ವ್ಯಕ್ತವಾದ ನಂತರ ದೆಹಲಿ ಸರ್ಕಾರ ಈ ನೊರೆಯನ್ನು ತೆಗೆಯಲು ಕ್ರಮಕ್ಕೆ ಮುಂದಾಗಿದೆ.
ಯಮುನಾ ನದಿಯಲ್ಲಿ ಅಪಾಯಕಾರಿ ವಿಷಯುಕ್ತ ನೊರೆ ಉಂಟಾಗಲು ಕಾರಣ ಹೆಚ್ಚಿದ ಅಮೋನಿಯಾ ಮತ್ತು ಫಾಸ್ಪೇಟ್ ಅಂಶಗಳೇ ಆಗಿವೆ. ಕೈಗಾರಿಕಾ ಮಾಲಿನ್ಯಗಳು, ಡಿಟರ್ಜಂಟ್ಗಳನ್ನು ನದಿಗೆ ಬಿಡುವುದರಿಂದ ಹೀಗಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗ ದೆಹಲಿ ಸರ್ಕಾರ ಯಮುನಾ ನದಿಯಲ್ಲಿ ಉಂಟಾಗಿರುವ ವಿಷಯುಕ್ತ ನೊರೆಯನ್ನು ತೆಗೆದುಹಾಕಲು 15 ಬೋಟ್ಗಳನ್ನು ನಿಯೋಜಿಸಿದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಛಠ್ ಪೂಜೆಯ ಮೂರನೇ ದಿನ ಸಂಧ್ಯಾ ಅರ್ಘ್ಯ ಎಂಬ ಆಚರಣೆ ಇರುತ್ತದೆ. ಈ ದಿನ ಸಾಮಾನ್ಯವಾಗಿ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಸೂರ್ಯನನ್ನು ಪೂಜಿಸುತ್ತಾರೆ. ಹೀಗಾಗಿ ಯಮುನೆಯಲ್ಲಿ ಈಗ ಉಂಟಾಗಿರುವ ನೊರೆಯನ್ನು ಸ್ವಚ್ಛ ಮಾಡುವ ಕಾಯಕಕ್ಕೆ ಸರ್ಕಾರ ಮುಂದಾಗಿದೆ.
ದೆಹಲಿ ಸರ್ಕಾರದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ಕಂದಾಯ ಇಲಾಖೆ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಜಂಟಿಯಾಗಿ ನದಿ ಸ್ವಚ್ಛತಾ ನಿರ್ಧಾರ ಕೈಗೊಂಡಿದೆ. ಎರಡು ಬೋಟ್ಗಳ ಮಧ್ಯೆ ಒಂದು ಗಟ್ಟಿಯಾದ ಬಟ್ಟೆಯನ್ನು ಕಟ್ಟಲಾಗುವುದು. ಈ ಮೂಲಕ ನೊರೆಯನ್ನು ದಡದತ್ತ ತರಲಾಗುವುದು ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ