ಮುಂಬೈ: ಬಿಜೆಪಿ ನಾಯಕರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಖುದ್ದು ಹಾಜರಾಗುವಂತೆ ಮುಂಬೈ ನ್ಯಾಯಾಲಯವೊಂದು ನೀಡಿರುವ ಸಮನ್ಸ್ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿಜೆಪಿಯ ಮಹೇಶ್ ಹುಕುಮ್ಚಂದ್ ಶ್ರೀಶ್ರೀಮಲ್ ಅವರು ರಾಹುಲ್ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ 2019ರ ಆಗಸ್ಟ್ 2ರಂದು ಗಿರ್ಗಾಂವ್ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ಆರಂಭಿಸಿದೆ. 2018ರ ಸೆಪ್ಟೆಂಬರ್ನಲ್ಲಿ ರಾಹುಲ್ ರಾಜಸ್ಥಾನದಲ್ಲಿ ನಡೆಸಿದ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.
ವಿಡಿಯೊವೊಂದರ ಬಗ್ಗೆ ಉಲ್ಲೇಖಿಸಿ ʼಭಾರತದ ಕಮಾಂಡರ್ ಇನ್ ಥೀಫ್ ಬಗ್ಗೆ ಕರಾಳ ವಾಸ್ತವವೊಂದಿದೆʼ ಎಂದು ರಾಹುಲ್ ಟ್ವೀಟ್ ಮಾಡಿದ್ದರು. “ಮೋದಿ ಅವರನ್ನು ‘ಕಮಾಂಡರ್ ಇನ್ ಥೀಫ್’ ಎಂದು ಕರೆಯುವ ಮೂಲಕ ರಾಹುಲ್ ಅವರು ಬಿಜೆಪಿಯ ಎಲ್ಲ ಸದಸ್ಯರು ಮತ್ತು ಮೋದಿ ಅವರೊಂದಿಗೆ ಸಂಪರ್ಕದಲ್ಲಿರುವ ಎಲ್ಲಾ ಭಾರತೀಯ ನಾಗರಿಕರ ವಿರುದ್ಧ ನೇರ ಕಳ್ಳತನದ ಆರೋಪ ಮಾಡಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.
ವಕೀಲ ಕುಶಾಲ್ ಮೋರೆ ಅವರ ಮೂಲಕ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ರಾಹುಲ್ ಗಾಂಧಿಯವರು “ದೂರುದಾರರ ರಹಸ್ಯ ರಾಜಕೀಯ ಅಜೆಂಡಾ ಮುಂದುವರೆಸುವ ಏಕೈಕ ಉದ್ದೇಶದಿಂದ ಪ್ರೇರೇಪಿತವಾದ ಈ ದೂರು ಕ್ಷುಲ್ಲಕ ಮತ್ತು ಹತಾಶೆಯ ದಾವೆಗೆ ಉದಾಹರಣೆ ಎಂದು ಹೇಳಿದ್ದಾರೆ.
ಮಾನಹಾನಿಗೊಳಗಾದ ವ್ಯಕ್ತಿ ಮಾತ್ರ ಮಾನನಷ್ಟ ಮೊಕದ್ದಮೆ ಪ್ರಾರಂಭಿಸಬಹುದಾಗಿದ್ದು ಪ್ರಸ್ತುತ ಪ್ರಕರಣ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ವಿನಾಯಿತಿಯೊಳಗೆ ಬರುವುದರಿಂದ ದೂರುದಾರರಿಗೆ ದೂರು ಸಲ್ಲಿಸಲು ಯಾವುದೇ ಅವಕಾಶವಿಲ್ಲ ಎಂದು ವಾದಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆಯೂ ರಾಹುಲ್ ವಿನಂತಿ ಮಾಡಿದ್ದು ಮಧ್ಯಂತರ ಅರ್ಜಿಯಲ್ಲಿ ಅವರು ವಿಚಾರಣೆಗೆ ತಡೆ ಕೋರಿದ್ದಾರೆ.
ನ್ಯಾಯಮೂರ್ತಿ ಎಸ್ ಕೆ ಶಿಂಧೆ ಅವರು ನವೆಂಬರ್ 22, 2021ಕ್ಕೆ ಪ್ರಕರಣ ಮುಂದೂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ