ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಹಿಂಗಾರು ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬ್ರಿಡ್ಜ್, ರಸ್ತೆ, ಬೆಳೆ ಹಾನಿ, ಕೆಲವಡೆ ಜನರು ಮೃತಪಟ್ಟಿದ್ದಾರೆ. ಆದಷ್ಟು ಬೇಗ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಮಳೆ ನಿಂತ ಕಡೆಯಲ್ಲಿ ಪ್ರಾಥಮಿಕ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಬೆಳೆಹಾನಿ, ಮಳೆಹಾನಿ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ. ಸಂಜೆಯೊಳಗೆ ವರದಿಗಳನ್ನು ಪರಿಶೀಲಿಸಲಾಗುವುದು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಘೋಷಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಾಯುಭಾರ ಕುಸಿತದಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಉಂಟಾದ ಹಾನಿ ಹಿನ್ನೆಲೆಯಲ್ಲಿ ಸಮೀಕ್ಷಾ ವರದಿ ಪರಿಶೀಲನೆ ನಡೆಸಿ ಪರಿಹಾರ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಜುಲೈ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಮಳೆ ಹಾನಿಯಿಂದ 3 ಲಕ್ಷ ರೈತರ ಜಮೀನು ನಾಶವಾಗಿತ್ತು. ಅವರಿಗೆ ಈಗಾಗಲೇ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಈ ಪೈಕಿ 130 ಕೋಟಿ ಬಾಕಿ ಇತ್ತು ಅದನ್ನು ಕೂಡಾ ಬಿಡುಗಡೆ ಮಾಡಲು ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರದ ಕುರಿತು ಮಾತನಾಡಿದ ಬೊಮ್ಮಾಯಿ, ನಾವು ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಅವರು ಕೊಡುವ ವರದಿ, ಶಿಫಾರಸು ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಿಡಿಎ ಬಗ್ಗೆ ಈಗಾಗಲೇ ನನಗೆ ಹಲವು ದೂರು ಬಂದಿದ್ದವು. ಭ್ರಷ್ಟಾಚಾರ ಬಗ್ಗೆ ವಿಶ್ವನಾಥ್ ನನ್ನ ಗಮನಕ್ಕೆ ತಂದಿದ್ದರು. ಮುಖ್ಯವಾಹಿನಿಗೆ ಬಿಡಿಎ ತರುವ ವ್ಯವಸ್ಥೆ ಮಾಡಬೇಕು. ಬಿಡಿಎ ಮೂಲಕ ನಾಗರಿಕ ಸೇವೆ ಸಮರ್ಪಕವಾಗಿಸುತ್ತೇವೆ ಎಂದು ಭರವಸೆ ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ