ಸ್ವರ್ಣವಲ್ಲೀ ಶ್ರೀಗಳಿಂದ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಭಗವದ್ಗೀತಾ ಅಭಿಯಾನ

ಕಾರವಾರ: ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಬಂಧನದಲ್ಲಿಯೇ ಇದ್ದಾರೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.
ಸ್ವರ್ಣವಲ್ಲೀ ಮಠದಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನದ ಭಾಗವಾಗಿ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿಯೂ ಭಗವದ್ಗೀತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಬಂಧನದಲ್ಲಿಯೇ ಇದ್ದಾರೆ ಎಂದು ಹೇಳಿದರು.
ತಿಳಿದೋ, ತಿಳಿಯದೆಯೋ ಕೆಲವು ತಪ್ಪು ಮಾಡಿ ಕೆಲವರು ಭೌತಿಕವಾಗಿ ಜೈಲಿನಲ್ಲಿ ಬಂಧಿಯಾಗಿರಬಹುದು. ಆದರೆ, ಹೊರ ಜಗತ್ತಿನಲ್ಲಿರುವವರು ಸಾಂಸಾರಿಕ ಬಂಧನದಲ್ಲಿದ್ದಾರೆ. ಹೀಗಾಗಿ ಜೈಲು ಸೇರಿದ್ದೇನೆ ಎಂದು ಕೊರಗುವ ಬದಲು ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಗ್ರಂಥಾಲಯದಲ್ಲಿರುವ ಪುಸ್ತಕ ಓದಿ ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿ ಮುಂತಾದ ಮಹಾತ್ಮರು ಜೈಲಿನಲ್ಲಿದ್ದೇ ಪುಸ್ತಕ ಬರೆದಿದ್ದಾರೆ ಎಂದು ಉದಾಹರಿಸಿದ ಶ್ರೀಗಳು ಭಗವದ್ಗೀತೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ಪ್ರತಿ ದಿನ ಓದಿ ಅದರ ಅರ್ಥ ತಿಳಿದುಕೊಳ್ಳಿ ಎಂದು ವಿಚಾರಣಾಧೀನ ಕೈದಿಗಳಿಗೆ ತಿಳಿಸಿ, ಗೀತೆಯ 3 ನೇ ಅಧ್ಯಾಯವನ್ನು ಬೋಧಿಸಿದರು. ಭಗವದ್ಗೀತಾ ಪುಸ್ತಕ ವಿತರಿಸಿದರು.
ಕಾರಾಗೃಹ ಅಧೀಕ್ಷಕ ಈರಣ್ಣ ರಂಗಾಪುರ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ.ಹೇಮಂತ ಕಾಮತ್ ಉಪನ್ಯಾಸ ನೀಡಿದರು. ಭಗವದ್ಗೀತಾ ಅಭಿಯಾನ ಸಮಿತಿಯ ಆನಂದ ನಾಯ್ಕ ವಂದಿಸಿದರು.
ಗೀತೆಯಲ್ಲಿ ಜೀವನದ ಸಾರವಿದೆ
ಮಾಡುವ ಕಾರ್ಯದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹೇಳಿದರು.
ಭಗವದ್ಗೀತಾ ಅಭಿಯಾನದ ಭಾಗವಾಗಿ ಕಾರವಾರ ನಗರಸಭೆ ಪೌರ ಕಾರ್ಮಿಕರು ಹಾಗೂ ನೌಕರರಿಗೆ ಭಗವದ್ಗೀತೆ ಬೋಧಿಸಿ, ಆಶೀರ್ವಚನ ನೀಡಿದರು. ಸರ್ಕಾರದ ಕೆಲಸ ಎಂದರೆ ದೇವರ ಕೆಲಸ. ದೇವರು ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮೇಲಾಧಿಕಾರಿಗಳಿಂದಲೂ ಮೆಚ್ಚುಗೆ ತಾನಾಗಿಯೇ ಬರುತ್ತದೆ. ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಕಾರ್ಯ ಅತಿ ಶ್ರೇಷ್ಠವಾದುದು ಎಂದರು. ಭಗವದ್ಗೀತೆಯಲ್ಲಿ ಜೀವನದ ಸಾರ ಅಡಕವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement